ಗೋಣಿಕೊಪ್ಪ ವರದಿ, ಏ. 2 : ಮೇಯಲು ಬಿಟ್ಟಿದ್ದ ಹಸುವನ್ನು ಹುಲಿ ಕೊಂದು ಹಾಕಿರುವ ಘಟನೆ ಕೊಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ಅಲ್ಲಿನ ಮಾಪಂಗಡ ಟಾಟು ಮುದ್ದಯ್ಯ ಎಂಬವರಿಗೆ ಸೇರಿದ ಹಸು ಹುಲಿ ಧಾಳಿಗೆ ಬಲಿಯಾಗಿದೆ. ಮೇಯಲು ಬಿಟ್ಟಿದ್ದ ಹಸು ಭಾನುವಾರ ಕೊಟ್ಟಿಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಗದ್ದೆ ಸಮೀಪ ಶೋಧ ನಡೆಸುವಾಗ ಹುಲಿ ಕೊಂದು ಹಾಕಿರುವದು ಪತ್ತೆಯಾಗಿದೆ. ಸತತವಾಗಿ ಈ ಗ್ರಾಮದಲ್ಲಿ ಹುಲಿ ಧಾಳಿ ನಡೆಸುತ್ತಿದ್ದು, ಇಲ್ಲಿಯವರೆಗೆ ಮುದ್ದಯ್ಯ ಎಂಬವರಿಗೆ ಸೇರಿದ 5 ಜಾನುವಾರುಗಳನ್ನು ಕೊಂದು ಹಾಕಿದೆ. ಇಷ್ಟೆಲ್ಲಾ ಧಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರಲ್ಲಿ ಕೇಳಿ ಬಂದಿದೆ. ಹುಲಿಯನ್ನು ಹಿಡಿದು ಜಾನುವಾರುಗಳನ್ನು ರಕ್ಷಿಸುವಂತೆ ಒತ್ತಾಯಿಸಿದ್ದಾರೆ.