ವೀರಾಜಪೇಟೆ, ಏ. 2: ಕಾಕೋಟುಪರಂಬು ಪ್ರಾಥಮಿಕ ಶಾಲೆಯ ಮುಂಭಾಗದ ಮುಖ್ಯ ರಸ್ತೆಯಲ್ಲಿ ಇಂದು ಬೆಳಗಿನ 9.30ರ ಸಮಯದಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ ಹಾಗೂ ಆಲ್ಟೋ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್‍ನ ಚಾಲಕ ಅರೆಯಡ ಮಿಥುನ್ ಜಯಪ್ರಕಾಶ್ (26) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೃತ ಮಿಥುನ್ ಬೇತ್ರಿ ಗ್ರಾಮದ ಹೆಮ್ಮಾಡು ನಿವಾಸಿಯಾಗಿದ್ದು ಕೆಲಸದ ನಿಮಿತ್ತ (ಕೆ.ಎ.12 9969) ಬೈಕ್‍ನಲ್ಲಿ ವೀರಾಜಪೇಟೆ ಕಡೆ ತೆರಳುತ್ತಿದ್ದಾಗ ಕಾಕೋಟುಪರಂಬು ಮುಖ್ಯ ರಸ್ತೆಯಲ್ಲಿ ಎದುರುಗಡೆಯಿಂದ ಬಂದ (ಕೆ.ಎ.12.ಪಿ.4897) ಆಲ್ಟೋ ಕಾರು ಡಿಕ್ಕಿಯಾಗಿದೆ. ಪರಿಣಾಮ ಸವಾರ ರಸ್ತೆಗೆ ಬಿದ್ದುದರಿಂದ ತಲೆ ರಸ್ತೆಗೆ ಬಡಿದಿದೆ. ಸವಾರ ಹೆಲ್ಮೆಟ್ ಧರಿಸದಿರುವುದು ತಲೆ ಒಡೆದು ಭೀಕರ ಗಾಯಕ್ಕೆ ಕಾರಣವಾಗಿದೆ. ಮಿಥುನ್ ಪದವೀಧರನಾಗಿದ್ದು ಮುಂದಿನ ಡಿಸೆಂಬರ್‍ನಲ್ಲಿ ಪೋಷಕರು ಮದುವೆಗೆ ನಿಶ್ಚಯಿಸಿದ್ದರು. ಮಿಥುನ್ ಹೆಮ್ಮಾಡು ಗ್ರಾಮದ ಅರೆಯಡ ಪೂಣಚ್ಚ ಅವರ ಪುತ್ರ.

ಕಾಕೋಟುಪರಂಬು ಮುಖ್ಯ ರಸ್ತೆಯಲ್ಲಿ ನಡೆದ ಭೀಕರ ಅಪಘಾತ ಸುದ್ದಿ ತಿಳಿಯುತ್ತಲೆ ಘಟನೆ ನಡೆದ ಸ್ಥಳದಲ್ಲಿ ಸುತ್ತಮುತ್ತಲಿನ ಗ್ರಾಮಸ್ತರು ಜಮಾಯಿಸಿದರು. ಸವಾರನ ಮೃತದೇಹವನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು.

ವಾಹನಗಳ ಮುಖಾಮುಖಿ ಡಿಕ್ಕಿಯಾದ ತಕ್ಷಣ ಕಾರಿನ ಚಾಲಕ ಉಮ್ಮರ್ ಕಾರನ್ನು ಅಲ್ಲಿಯೇ ಬಿಟ್ಟು ಗ್ರಾಮಾಂತರ ಪೊಲೀಸರ ಮುಂದೆ ಶರಣಾಗಿದ್ದಾನೆ. ಗ್ರಾಮಾಂತರ ಪೊಲೀಸರು ಚಾಲಕ ಉಮ್ಮರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.