ಸೋಮವಾರಪೇಟೆ,ಏ.2: ಗೋದಾಮಿನ ಬೀಗ ಮುರಿದು ಸುಮಾರು 2.70 ಲಕ್ಷ ಮೌಲ್ಯದ ಕರಿಮೆಣಸು ಹಾಗೂ ರೋಬಸ್ಟಾ ಕಾಫಿಯನ್ನು ಕಳವು ಮಾಡಿರುವ ಘಟನೆ ಮಾದಾಪುರ ಸಮೀಪದ ಜಂಬೂರು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.ಜಂಬೂರು ಗ್ರಾಮದ ನಿವಾಸಿ, ಮಾದಾಪುರ ಗ್ರಾ.ಪಂ. ಸದಸ್ಯ ಎಂ.ಎ. ಮಜೀದ್ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಬೆಳೆಯಲಾಗಿದ್ದ, ತಲಾ 32 ಕೆ.ಜಿ. ತೂಕದ ಸುಮಾರು 21 ಚೀಲ ಕರಿಮೆಣಸು ಹಾಗೂ 50 ಕೆ.ಜಿ. ತೂಕದ 4 ಚೀಲ ರೋಬಸ್ಟಾ ಕಾಫಿಯನ್ನು ಒಣಗಿಸಿ ತಮ್ಮದೇ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದರು.ನಿನ್ನೆ ರಾತ್ರಿ ಮಜೀದ್ ಅವರ ಕುಟುಂಬದವರು ಮನೆಯಲ್ಲಿಯೇ ಮಲಗಿದ್ದ ಸಂದರ್ಭ ನಡುರಾತ್ರಿ ಸುಮಾರು 2 ಗಂಟೆ ವೇಳೆಗೆ ಕಳ್ಳರು ಮನೆಯ ಪಕ್ಕದಲ್ಲಿಯೇ ಇರುವ ಗೋದಾಮಿನ ಬೀಗ ಒಡೆದು ಕರಿಮೆಣಸು ಹಾಗೂ ಕಾಫಿಯನ್ನು ಹೊತ್ತೊಯ್ದಿದ್ದಾರೆ.

ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ಮನೆ ಸಮೀಪದ ತೋಟಗಾರಿಕಾ ಇಲಾಖೆಗೆ ಸೇರಿದ ಬಾಣೆ ಜಾಗದಲ್ಲಿ ಕರಿಮೆಣಸು ತುಂಬಿದ್ದ 3 ಚೀಲಗಳು ಕಂಡುಬಂದಿದೆ. ಈ ಬಗ್ಗೆ ಮಜೀದ್ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.