ಮಡಿಕೇರಿ, ಏ. 2: ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಸಿಡಿಲು ಬಡಿದು ವ್ಯಕ್ತಿಯೋರ್ವರಿಗೆ ಸುಟ್ಟ ಗಾಯಗಳಾಗಿ ಸುಳ್ಯ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.ಇಲ್ಲಿಗೆ ಸಮೀಪದ ಮದೆ ಗ್ರಾ.ಪಂ. ವ್ಯಾಪ್ತಿಯ ದೇವರಕೊಲ್ಲಿಯ ಗ್ಲೇನ್‍ಕೂರ್ಗ್ ತೋಟದಲ್ಲಿ ನಿನ್ನೆ ಸಂಜೆ ಮನುಕುಮಾರ್, ನೂರ್ ಇಸ್ಲಾಂ, ಸಲಾಂ ಹಾಗೂ ಹಬೀಬುಲ್ ಎಂಬವರುಗಳು ಕೆಲಸ ಮಾಡುತ್ತಿದ್ದ ಸಂದರ್ಭ ಬಂದೆರಗಿದ ಸಿಡಿಲು ಮನುಕುಮಾರ್ ಅವರಿಗೆ ತಗಲಿದೆ. ಇನ್ನುಳಿದ ಮೂವರು ಅನತಿ ದೂರದಲ್ಲಿದ್ದುದರಿಂದ ಅವರುಗಳಿಗೇನಾಗಿಲ್ಲವಾದರೂ ಸಿಡಿಲಿನ ಅಬ್ಬರಕ್ಕೆ ಆಘಾತಕ್ಕೊಳಗಾಗಿದ್ದಾರೆ. ಮನುಕುಮಾರ್ ಅವರ ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಸುಟ್ಟ ಗಾಯಗಳಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿದೆ.