ಕುಶಾಲನಗರ, ಏ. 5: ಕುಶಾಲನಗರ ಪಟ್ಟಣದಲ್ಲಿ ವಾಹನಗಳ ಸಂಚಾರ ದಟ್ಟಣೆ ಅಧಿಕವಾಗಿದ್ದು ಸಮರ್ಪಕ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ನಗರದ ಹೃದಯ ಭಾಗವಾದ ಗಣಪತಿ ದೇವಾಲಯ ಬಳಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ಸಿಗ್ನಲ್ ದೀಪಗಳ ಅಳವಡಿಕೆ ಕೆಲಸ ನಡೆಯುತ್ತಿದೆ.ಮೈಸೂರು ಭಾಗದಿಂದ ಬರುವ ಹಾಗೂ ಮಡಿಕೇರಿ ಕಡೆಗೆ ತೆರಳುವ ಹಾಗೂ ಹಾಸನ ಕಡೆಗೆ ಸಾಗುವ ವಾಹನಗಳ ನಿಯಂತ್ರಣ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸ್ ಇಲಾಖೆ ಮೂಲಕ ಖಾಸಗಿ ಸಂಸ್ಥೆಯೊಂದು ಕಳೆದ ಎರಡು ದಿನಗಳಿಂದ ಕೆಲಸ ನಿರ್ವಹಿಸುತ್ತಿದೆ. ವೃತ್ತದಲ್ಲಿ ಸಂಪರ್ಕ ಕಲ್ಪಿಸುವ 5 ರಸ್ತೆಗಳಲ್ಲಿ ಸ್ವಯಂ ಚಾಲಿತ ಸಿಗ್ನಲ್ ವ್ಯವಸ್ಥೆಗೆ ಇಲಾಖೆ ಕ್ರಮಕೈಗೊಂಡಿದೆ.