ಸೋಮವಾರಪೇಟೆ, ಏ. 5: ಸಾಲದ ವಿಚಾರವಾಗಿ ಮಾತಿಗೆ ಮಾತು ಬೆಳೆದು ಬಸ್‍ನಲ್ಲೇ ಚೂರಿಯಿಂದ ಇರಿದ ಘಟನೆ ಹೊಸಬೀಡು ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ಯಡದಂಟೆ ಗ್ರಾಮದ ಲವ ಎಂಬವರು ಗಾಯಗೊಂಡಿದ್ದು, ಅದೇ ಗ್ರಾಮದ ಆರೋಪಿ ಚಂದ್ರಶೇಖರ್ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ.

ತಮ್ಮ ಗ್ರಾಮಕ್ಕೆ ತೆರಳಲು ಸಂಜೆ 5.30ಕ್ಕೆ ಸೋಮವಾರಪೇಟೆಯಿಂದ ಸಕಲೇಶಪುರಕ್ಕೆ ಸಂಚರಿಸುವ ಕೆಎಸ್‍ಆರ್‍ಟಿಸಿ ಬಸ್‍ನ್ನು ಇಬ್ಬರು ಏರಿದ್ದಾರೆ. ಬಸ್‍ನಲ್ಲಿ ಸಾಲದ ವಿಚಾರವಾಗಿ ಇಬ್ಬರ ಮಧ್ಯೆ ಜಗಳವೇರ್ಪಟ್ಟು ಹೊಸಬೀಡು ಸಮೀಪ ಆರೋಪಿ ಚಾಕುವಿನಿಂದ ಕೆನ್ನೆಯ ಭಾಗಕ್ಕೆ ತಿವಿದಿದ್ದಾನೆ. ಗಾಯಾಳುವಿಗೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಮಡಿಕೇರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಠಾಣಾಧಿಕಾರಿ ಶಿವಣ್ಣ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಬಾಬು ಜಗಜೀವನ ರಾಮ್ ಜನ್ಮ ದಿನಾಚರಣೆ

ಮಡಿಕೇರಿ, ಏ. 5: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ 111 ಜಯಂತಿಯನ್ನು ಗುರುವಾರ ಸರಳವಾಗಿ ಆಚರಿಸಲಾಯಿತು.

ನಗರದ ಕೋಟೆ ಹಳೇ ವಿಧಾನಸಭಾ ಸಭಾಂಗಣದಲ್ಲಿ ಜಿ.ಪಂ.ಸಿ.ಇ.ಓ ಪ್ರಶಾಂತ್ ಕುಮಾರ್ ಮಿಶ್ರ ಅವರು ಡಾ.ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಾಯದೇವಿ ಗಲಗಲಿ, ವ್ಯವಸ್ಥಾಪಕರಾದ ಆಶಾ, ನಾನಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.