ಕೂಡಿಗೆ, ಏ. 5 : ಹಸೆಮಣೆ ಏರಬೇಕಾಗಿದ್ದ ಯುವಕನೋರ್ವ ಆಕಸ್ಮಿಕ ಅವಘಡದಿಂದ ಸಾವನ್ನಪ್ಪಿದ ಘಟನೆ ಶಿರಂಗಾಲದಲ್ಲಿ ನಡೆದಿದೆ.

ತೊರೆನೂರು ಗ್ರಾಮದ ನಿವಾಸಿಗಳಾದ ರಾಮಸ್ವಾಮಿ (ಸೋಮಣ್ಣ) ಸುಕನ್ಯ ಅವರ ಮೊದಲ ಮಗ ದರ್ಶನ್(27) ಮೃತಪಟ್ಟಿರುವ ಯುವಕ. ಈತ ಶಿರಂಗಾಲದ ತನ್ನ ಸ್ನೇಹಿತನ ಗದ್ದೆಯಲ್ಲಿ ಟ್ರಾಕ್ಟರ್ ಮೂಲಕ ಉಳುಮೆ ಮಾಡುವ ಸಂದರ್ಭ ಟ್ರಾಕ್ಟರ್ ಮಗುಚಿಕೊಂಡಿದೆ. ಪರಿಣಾಮ ಟ್ರಾಕ್ಟರ್‍ನ ಕೆಳಭಾಗಕ್ಕೆ ಸಿಲುಕಿಕೊಂಡು, ಗಂಭೀರ ಸ್ಥಿತಿಯಲ್ಲಿದ್ದ ದರ್ಶನನ್ನು ಜಮೀನಲ್ಲಿದ್ದ ರೈತರು ಎಳೆದು ತಕ್ಷಣ ಕುಶಾಲನಗರ ಆರೋಗ್ಯ ಕೇಂದ್ರಕ್ಕೆ ಕರೆತರುವ ಸಂದರ್ಭ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾನೆ. ತಾ. 12ರಂದು ಶಿರಂಗಾಲ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯಿಸಲಾಗಿತ್ತು. ಈಗಾಗಲೇ ಮೃತ ದರ್ಶನ್ ಮತ್ತು ಮನೆಯವರು ತಮ್ಮ ಕುಟುಂಬಸ್ಥರಿಗೆಲ್ಲಾ ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಂಚಿ, ಮದುವೆಯ ತಯಾರಿ ನಡೆಸುತ್ತಿದ್ದರು. ಈ ಹಂತದಲ್ಲಿ ಇಂತಹ ಅನಾಹುತ ಸಂಭವಿಸಿರುವದು ಎರಡು ಕುಟುಂಬಗಳನ್ನು ದುಃಖಕ್ಕೆ ತಳ್ಳಿದೆ. ಆತನೊಂದಿಗೆ ಹಸೆಮಣೆ ಏರಬೇಕಿದ್ದ ಯುವತಿಯ ಆಕ್ರಂದನ ಮುಗಿಲು ಮುಟ್ಟಿದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಕುಶಾಲನಗರ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.