ಗೋಣಿಕೊಪ್ಪ ವರದಿ, ಏ. 5: ಹುಲಿ ಧಾಳಿಗೆ ಕರು ಬಲಿಯಾಗಿರುವ ಘಟನೆ ಮಾಯಮುಡಿ ಗ್ರಾಮದ ಕಲ್ತೋಡು ಎಂಬಲ್ಲಿ ನಡೆದಿದೆ. ಅಲ್ಲಿನ ಚೆಪ್ಪುಡೀರ ಮುದ್ದುರಾಜ್ ಎಂಬವರಿಗೆ ಸೇರಿದ ಕರುವನ್ನು ಕಳೆದ ರಾತ್ರಿ ಕೊಟ್ಟಿಗೆಗೆ ಧಾಳಿ ನಡೆಸಿ ಕೊಂದು ಹಾಕಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಕರುವಿನ ಮೈಯಲ್ಲಿ ಪರಚಿದ ಗುರುತುಗಳಿದ್ದು, ಹೊತ್ತೊಯ್ಯಲಾಗದೆ ಬಿಟ್ಟು ಹೋಗಿದೆ. ಸ್ಥಳಕ್ಕೆ ತಿತಿಮತಿ ಆರ್‍ಆರ್‍ಟಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮಾಹಿತಿ ತಿಳಿದಂತೆ ಕಾಯಾಚರಣೆಗೆ ಮುಂದಾಗಿರುವ ತಿತಿಮತಿ ರ್ಯಾಪಿಡ್ ರೆಸ್ಪಾನ್ಸ್ ಟೀಂ ಸ್ಥಳದಲ್ಲಿ ಬೋನ್ ಇರಿಸಿದೆ. ರಾತ್ರಿ ಮತ್ತೆ ಸ್ಥಳಕ್ಕೆ ಬಂದಿದ್ದನ್ನು ಸಿಬ್ಬಂದಿ ಗುರುತಿಸಿದ್ದಾರೆ. ಮತ್ತೆ ಕರುವಿನ ಮೃತದೇಹವನ್ನು ಹೊತ್ತೊಯ್ಯಲು ಬಂದಿತ್ತಾದರೂ ಬೋನ್‍ಗೆ ನುಗ್ಗಲು ಹಿಂದೇಟು ಹಾಕಿದೆ. ಇದರಿಂದಾಗಿ ಹುಲಿಯನ್ನು ಸೆರೆ ಹಿಡಿಯಲು ಆಗಲಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಸ್ಥಳಕ್ಕೆ ಎಸಿಎಫ್ ಶ್ರೀಪತಿ, ವಲಯ ಅಧಿಕಾರಿ ಅಶೋಕ್ ಹಾಗೂ ಆರ್‍ಆರ್‍ಟಿ ತಂಡದ ನಾಯಕ ಸಂಜು ಸಂತೋಷ್ ತೆರಳಿ ಪರಿಶೀಲನೆ ನಡೆಸಿದರು.