ಸೋಮವಾರಪೇಟೆ, ಏ. 6: ಗ್ರಾಮೀಣ ಪ್ರದೇಶದ ಜನಪದದ ಪ್ರಮುಖ ಅಂಗವಾದ ಸುಗ್ಗಿ ಉತ್ಸವಗಳು ಮಲೆನಾಡು ಪ್ರದೇಶದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುತ್ತವೆ. ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಿ ಗ್ರಾಮೀಣ ಭಾಗದ ಜನರು ಕೃಷಿ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸಮಯ ಸನ್ನಿಹಿತವಾಗುತ್ತಿರುವಾಗಲೇ ಕೃಷಿ ಕಾರ್ಯಗಳಿಗೆ ಯಾವದೇ ತೊಂದರೆಯಾಗಬಾರದು, ಗ್ರಾಮ ಸುಭೀಕ್ಷೆಯಿಂದಿರಬೇಕು ಎಂದು ಗ್ರಾಮದ ಕಲ್ಯಾಣಕ್ಕಾಗಿ ಗ್ರಾಮದೇವರಿಗೆ ಹಾಗೂ ಪ್ರಕೃತಿದೇವಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವ ವಿಶಿಷ್ಟ ಹಬ್ಬವಾದ ಸುಗ್ಗಿ ಉತ್ಸವಗಳು ತಾಲೂಕಿನ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಶ್ರದ್ಧಾಭಕ್ತಿಯಿಂದ ಇಂದಿಗೂ ಜರುಗುತ್ತಿವೆ.

ಮಲೆನಾಡಿನ ಪ್ರದೇಶವಾದ ಪುಷ್ಪಗಿರಿ ಬೆಟ್ಟಶ್ರೇಣಿಯ ತಪ್ಪಲಲ್ಲಿರುವ ಗ್ರಾಮಗಳಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಕಂಡುಬರುತ್ತಿದೆ. ಈ ವ್ಯಾಪ್ತಿಯ ಗ್ರಾಮಗಳ ಗ್ರಾಮದೇವತೆಯಾದ ಸಬ್ಬಮ್ಮ ದೇವಿಗೆ ಊರಿನ ಎಲ್ಲರೂ ಒಟ್ಟು ಸೇರಿ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುವ ಆಚರಣೆ ತಲೆತಲಾಂತರದಿಂದ ನಡೆದುಕೊಂಡು ಬಂದಿದ್ದು ಈ ಸಂದರ್ಭ ಗ್ರಾಮದ ಹೊರಭಾಗಗಳಲ್ಲಿ ನೆಲೆಸಿರುವ ಮಂದಿಯೂ ಗ್ರಾಮಕ್ಕೆ ಆಗಮಿಸುವ ಹಿನ್ನೆಲೆ ಇಡೀ ಗ್ರಾಮ ಸಂಭ್ರಮದಲ್ಲಿರುತ್ತದೆ.

ಸುಗ್ಗಿ ಉತ್ಸವ ಪ್ರಾರಂಭವಾಗುತ್ತಿದ್ದಂತೆ ಗ್ರಾಮದ ಜನರ ಮನೆಗಳಲ್ಲಿ ಗ್ರಾಮದೇವತೆಗಳ ಪೂಜೆಗಳು ನಡೆಯುತ್ತವೆ. ಗ್ರಾಮದಲ್ಲಿ ರೋಗರುಜಿನಗಳು ಬರದಂತೆ, ಮುಂದೆ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆ ನಡೆದು ಸಮೃದ್ಧ ಫಸಲು ಕೈಸೇರುವದಕ್ಕೆ ಗ್ರಾಮದೇವತೆಗಳು ಹರಸಬೇಕೆಂದು ಪ್ರಾರ್ಥನೆ ಮಾಡುತ್ತಾರೆ.

ಸುಗ್ಗಿ ಉತ್ಸವ ಪ್ರಾರಂಭದ ದಿನದಿಂದ ‘ಸುಗ್ಗಿ ಸಾರು’ ಎಂಬ ಕಟ್ಟುನಿಟ್ಟಿನ ಆಚರಣೆಯನ್ನು ಕೈಗೊಳ್ಳಲಾಗುತ್ತದೆ. ಉತ್ಸವದ 15 ದಿನಗಳಲ್ಲಿ ಹಸಿ ಮರ ಕಡಿಯುವದು, ಒಣಗಿದ ಗಿಡ ಬಳ್ಳಿಗಳನ್ನು ಮುರಿಯದಂತೆ ಎಚ್ಚರ ವಹಿಸುತ್ತಾರೆ. ಹಗಲು ವೇಳೆ ನೆಂಟರಿಷ್ಟರು ಮನೆ ಸೇರದಂತೆ ನಿರ್ಬಂಧ ವಿಧಿಸುತ್ತಾರೆ. ನಕ್ಷತ್ರಗಳು ಕಂಡ ನಂತರವೇ ಮನೆಯೊಳಕ್ಕೆ ಬರಮಾಡಿಕೊಳ್ಳುತ್ತಾರೆ. ಹಗಲಿನ ವೇಳೆ ಹೊರಗಡೆಯಿಂದ ಆಹಾರ ಸಾಮಗ್ರಿಗಳನ್ನು ಖರೀದಿಸುವಂತಿಲ್ಲ. ಇಂತಹ ಕಟ್ಟುಪಾಡುಗಳು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸುಗ್ಗಿ ಸಂದರ್ಭ ಚಾಲ್ತಿಯಲ್ಲಿರುತ್ತವೆ.

ಕೂತಿ ನಾಡು ಶ್ರೀ ಸಬ್ಬಮ್ಮ ದೇವಿಯ (ಲಕ್ಷ್ಮೀ) ಉತ್ಸವ ಎಂದೇ ಹೆಸರಾಗಿರುವ ನಗರಳ್ಳಿ ಸುಗ್ಗಿ ಹಲವು ವೈಶಿಷ್ಟ್ಯಗಳೊಂದಿಗೆ ನೆರವೇರುತ್ತದೆ. ಕೂತಿ ನಾಡು ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟದಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಪಕ್ಕದ ಸಕಲೇಶಪುರ ತಾಲೂಕಿನ ಓಡಳ್ಳಿ ಸೇರಿದಂತೆ ಒಟ್ಟು 18 ಗ್ರಾಮಗಳ ಜನರು ಒಂದೆಡೆ ಕಲೆತು ಗ್ರಾಮ ದೇವತೆ ಸಬ್ಬಮ್ಮ ದೇವಿಗೆ ಅನಾದಿಕಾಲದಿಂದ ನಡೆದುಬಂದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.

ನಗರಳ್ಳಿ ಸುಗ್ಗಿ ಎಂದೇ ಕರೆಯಲ್ಪಡುವ ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸುಗ್ಗಿಗೆ ಕಳೆದ ತಾ. 1 ರಂದು ಚಾಲನೆ ದೊರೆತಿದೆ. ಗ್ರಾಮದಲ್ಲಿರುವ ಸಂಸ್ಕøತಿಯ ಪ್ರತೀಕವಾದ ಕೋವಿಗಳನ್ನು ಚಾವಡಿಕಟ್ಟೆಯಲ್ಲಿಟ್ಟು ಭಕ್ತಿಭಾವದಿಂದ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗಿದೆ.

ಉತ್ಸವದ ಕೊನೆ ದಿನ ನಗರಳ್ಳಿಯ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಜಾನಪದದ ಭಾಗವಂತೂ ಗ್ರಾಮೀಣ ಭಾಗದ ಜನರು ಗ್ರಾಮ ದೇವತೆಯ ಮೇಲಿಟ್ಟಿರುವ ಭಕ್ತಿಭಾವವನ್ನು ಪ್ರಕಟಗೊಳಿಸುವ ಬಹುಮುಖ್ಯ ಕ್ಷಣಗಳಾಗುತ್ತವೆ.

ಇದರೊಂದಿಗೆ ಸಮೀಪದ ತೋಳೂರು ಶೆಟ್ಟಳ್ಳಿ ಸಬ್ಬಮ್ಮ ದೇವರ ವಾರ್ಷಿಕ ಸುಗ್ಗಿ ಉತ್ಸವ ಕೂಡ ಈ ವ್ಯಾಪ್ತಿಯಲ್ಲಿ ನಡೆಯುವ ಬಹುದೊಡ್ಡ ಸುಗ್ಗಿ ಉತ್ಸವವಾಗಿದೆ. ಬೀರೇದೇವರ ಹಬ್ಬ ಆಚರಣೆಯೊಂದಿಗೆ ಸುಗ್ಗಿ ಪ್ರಾರಂಭವಾಗಲಿದ್ದು ಗುಮ್ಮನ ಮರಿ ಪೂಜೆ, ಸಾಮೂಹಿಕ ಭೋಜನ ಊರೊಡೆಯನ ಪೂಜೆ, ಬೆಂಕಿಕೊಂಡ ಹಾಯುವದು, ಮೊದಲ ಬೇಟೆ ನಂತರ ಊರು ಸುಗ್ಗಿ, ದೇವರ ಗಂಗಾಸ್ನಾನ ಹಾಗೂ ದೊಡ್ಡ ಪೂಜೆಗಳು ಸುಗ್ಗಿ ಉತ್ಸವದ ಪ್ರಮುಖ ಭಾಗಗಳಾಗಿವೆ. ಇದರೊಂದಿಗೆ ಸೋಮವಾರಪೇಟೆ ವ್ಯಾಪ್ತಿಯ ಚೌಡ್ಲು, ಯಡೂರು, ಹಾನಗಲ್ಲು ಶೆಟ್ಟಳ್ಳಿ ಗ್ರಾಮಗಳಲ್ಲೂ ಸುಗ್ಗಿ ಉತ್ಸವ ನಡೆಯಲಿವೆ.

ಇದೀಗ ಎಲ್ಲೆಡೆ ಭತ್ತ ಕೃಷಿ ಮುಕ್ತಾಯವಾಗಿದ್ದು, ಮುಂದಿನ ಸಾಲಿನ ಕೃಷಿ ಕಾರ್ಯಕ್ಕೆ ಮಳೆಗಾಲ ಆಗಮಿಸಬೇಕಾಗಿದೆ. ಈ ಅವಧಿಯಲ್ಲಿ ಪ್ರಕೃತಿ ದೇವಿ ಮುನಿಸಿಕೊಳ್ಳದೆ ಕಾಲಕಾಲಕ್ಕೆ ತಕ್ಕಂತೆ ಮಳೆ ಬೆಳೆ ನೀಡಲಿ ಎಂದು ಗ್ರಾಮದೇವರಲ್ಲಿ ಪೂಜಿಸಿ ಕೃಷಿಕಾರ್ಯದಲ್ಲಿ ತೊಡಗಲು ಸಿದ್ಧತೆ ನಡೆಸುವ ಗ್ರಾಮೀಣ ರೈತನ ಸಂಭ್ರಮದ ಸುಗ್ಗಿಯ ಹಿಗ್ಗು ಎಲ್ಲೆಡೆ ಕಂಡುಬರುತ್ತಿದೆ.

ನಗರಳ್ಳಿ ಸುಗ್ಗಿ: ನಗರಳ್ಳಿ ಸುಗ್ಗಿ ಹಬ್ಬಕ್ಕೆ ಏ. 1 ರಿಂದ ಚಾಲನೆ ದೊರೆತಿದ್ದು, ಪ್ರಮುಖ ಸುಗ್ಗಿ ಹಬ್ಬದಾಚರಣೆ ತಾ. 9 ರಂದು ನಗರಳ್ಳಿ ಗ್ರಾಮದ ಸುಗ್ಗಿಕಟ್ಟೆ ಹಾಗೂ ತಾ. 12 ರಂದು ದೇವರ ಬನದಲ್ಲಿ ನಡೆಯಲಿದೆ.

ತೋಳೂರುಶೆಟ್ಟಳ್ಳಿ: ತೋಳೂರುಶೆಟ್ಟಳ್ಳಿಯಲ್ಲಿ ನಡೆಯುವ ಸುಗ್ಗಿ ಹಬ್ಬಕ್ಕೆ ತಾ. 8 ರಂದು ಚಾಲನೆ ದೊರೆಯಲಿದ್ದು, ತಾ. 27 ರವರೆಗೆ ವಿವಿಧ ಆಚರಣೆಗಳೊಂದಿಗೆ ನಡೆಯಲಿದೆ. ತಾ. 26 ರಂದು ಊರು ಸುಗ್ಗಿ, ತಾ. 27 ರಂದು ಹಗಲು ಸುಗ್ಗಿ (ನೆಂಟರ ಸುಗ್ಗಿ) ನಡೆಯಲಿದೆ.

ಯಡೂರು ಸುಗ್ಗಿ: ತಾ. 8 ರಂದು ಸುಗ್ಗಿ ಸಭೆ ನಡೆಸಿದ ನಂತರ ಪುಷ್ಪಗಿರಿಗೆ ತಾ. 9 ರಂದು ತೆರಳಿ ಮಳೆ ಕರೆಯುವ ಮೂಲಕ ಹಬ್ಬಕ್ಕೆ ಚಾಲನೆ ದೊರೆಯಲಿದ್ದು, ತಾ. 23 ರಂದು ಹಗಲು ಸುಗ್ಗಿ ನಡೆದು ತಾ. 24 ರಂದು ಮಾರಿ ಕಳಿಸುವ ಮೂಲಕ ಮುಕ್ತಾಯಗೊಳ್ಳಲಿದೆ.

ಹಾನಗಲ್ಲು ಶೆಟ್ಟಳ್ಳಿ ಸುಗ್ಗಿ: ತಾ. 12 ರಿಂದ ಹಾನಗಲ್ಲು ಶೆಟ್ಟಳ್ಳಿ ಸುಗ್ಗಿ ಆರಂಭಗೊಳ್ಳಲಿದ್ದು, ತಾ. 20 ರಂದು ದೊಡ್ಡಸುಗ್ಗಿ, ತಾ. 24 ರಂದು ಮಾರಿಕಳಿಸುವ ಮೂಲಕ ಪ್ರಸಕ್ತ ಸಾಲಿನ ಉತ್ಸವಕ್ಕೆ ತೆರೆ ಬೀಳಲಿದೆ.

ಚೌಡ್ಲು ಸುಗ್ಗಿ: ಎರಡು ವರ್ಷಕ್ಕೊಮ್ಮೆ ನಡೆಯುವ ಚೌಡ್ಲು ಸುಗ್ಗಿ ಕಳೆದ ವರ್ಷ ನಡೆದಿದ್ದು, ಈ ಬಾರಿ ಹರಿಸೇವೆ ವಿಧಿವಿಧಾನ ಮಾತ್ರ ಜರುಗಲಿದೆ. ತಾ. 21 ರಂದು ಚೌಡ್ಲು ಕೆರೆಯ ಬಳಿಯಲ್ಲಿರುವ ಚೌಡ್ಲಯ್ಯ-ಮೂಡ್ಲಯ್ಯ ವೀರಗಲ್ಲಿನ ಬಳಿ ಹರಿಸೇವೆ ನಡೆಯಲಿದೆ.

-ವಿಜಯ್ ಹಾನಗಲ್