ಸೋಮವಾರಪೇಟೆ, ಏ. 28: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಅವರ ಪರವಾಗಿ ಅವರ ಸಹೋದರ ಹಾಗೂ ಚಲನಚಿತ್ರ ನಟ ಜೈಜಗದೀಶ್ ಮತ್ತು ಕಾಂಗ್ರೆಸ್ ನಾಯಕರುಗಳು ಪಟ್ಟಣದಲ್ಲಿ ಮತಯಾಚಿಸಿದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಯೋಜನೆಗಳೇ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಿದ್ದು, ರಾಜ್ಯದ ಆಡಳಿತ ಚುಕ್ಕಾಣಿ ಕಾಂಗ್ರೆಸ್ ಹಿಡಿಯಲಿದೆ. ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ಜೈಜಗದೀಶ್ ಹೇಳಿದರು.

ಮತಯಾಚನೆ ಸಂದರ್ಭ ಡಿ.ಸಿ.ಸಿ. ಉಪಾಧ್ಯಕ್ಷ ಕೆ.ಎ.ಆದಂ, ಕಾಂಗ್ರೆಸ್ ಪರಿಶಿಷ್ಟಜಾತಿ ಮತ್ತು ವರ್ಗದ ರಾಜ್ಯ ಸಂಯೋಜಕ ಬಿ.ಇ.ಜಯೇಂದ್ರ, ಪಕ್ಷದ ಮುಖಂಡರುಗಳಾದ ಶೀಲಾ ಡಿಸೋಜ, ಮೀನಾ ಕುಮಾರಿ, ಬಿ.ಸಿ.ವೆಂಕಟೇಶ್, ಎಚ್.ಎ.ನಾಗರಾಜ್, ಬಿ.ಜಿ.ಇಂದ್ರೇಶ್, ತಬ್ರೇಶ್ ಖಾನ್, ಹೆತ್ತೂರು ರಾಜಣ್ಣ, ವಿನಯ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.