ಮಡಿಕೇರಿ, ಏ. 28: ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಇದೀಗ ಅಂತಿಮ ಸ್ಪರ್ಧಾ ಕಣ ಸಜ್ಜುಗೊಂಡಿದೆ. ತಾ. 27 ರಂದು ನಾಮಪತ್ರ ವಾಪಸಾತಿ ಅವಧಿ ಇದ್ದು, ಈ ತನಕವೂ ಅಂತಿಮ ಸ್ಪರ್ಧಾ ಕಣದಲ್ಲಿ ಯಾರು ಉಳಿಯಲಿದ್ದಾರೆ ಎಂಬ ಖಾತ್ರಿ ಇರಲಿಲ್ಲ. ಪಕ್ಷೇತರರ ಸ್ಪರ್ಧೆ, ಬಂಡಾಯ ಸ್ಪರ್ಧೆಯಿಂದಾಗಿ ಏನನ್ನೂ ವಿಶ್ಲೇಷಿಸಲು ಮತದಾರರಿಗೆ ಅವಕಾಶವಾಗಿರಲಿಲ್ಲ. ಇದೀಗ ನಿನ್ನೆ (ತಾ.27) ಎಲ್ಲವೂ ಒಂದು ಹಂತಕ್ಕೆ ಬಂದಿದೆ. ಮಡಿಕೇರಿ ಕ್ಷೇತ್ರದಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸೇರಿ ಒಟ್ಟು 11 ಮಂದಿ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ 6 ಮಂದಿ ಸ್ಪರ್ಧಾ ಕಣದಲ್ಲಿ ಉಳಿದಿದ್ದು, ಪ್ರಚಾರ ರಂಗೇರುತ್ತಿದೆ. ಆಯಾ ಪಕ್ಷದ ಅಭ್ಯರ್ಥಿಗಳು ತಮ್ಮ ಬೆಂಬಲಿಗರು, ‘ಸ್ಟಾರ್’ ಪ್ರಚಾರಕರೊಂದಿಗೆ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ತಲ್ಲೀನರಾಗಿದ್ದಾರೆ.