ಸಿದ್ದಾಪುರ, ಏ. 29: ಬಿ.ಜೆ.ಪಿ ಸರಕಾರ ಅಧಿಕಾರಕ್ಕೆ ಬಂದರೆ ಒಂದು ತಿಂಗಳಲ್ಲಿ ರೈತರ ಹಾಗೂ ಬಡವರ ಎಲ್ಲಾ ಸಾಲಗಳನ್ನು ಮನ್ನ ಮಾಡಲಾಗುವದೆಂದು ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಕೆ.ಜಿ ಬೋಪಯ್ಯ ಭರವಸೆ ನೀಡಿದ್ದಾರೆ.ಸಿದ್ದಾಪುರ ಬಸ್ಸ್ ನಿಲ್ದಾಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿ.ಜೆ.ಪಿ ಸರಕಾರ ಅಧಿಕಾರದಲ್ಲಿರುವ ಸಂದರ್ಭ ರಾಜ್ಯ ಹಾಗೂ ಜಿಲ್ಲೆಯನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದು, ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷಕ್ಕೆ ಅಧಿಕಾರಕ್ಕೆ ಬರುವದು ಖಚಿತ ಎಂದರು. ತಾನು ಶಾಸಕನಾಗಿದ್ದಾಗ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಕರ್ಯವನ್ನು ಒದಗಿಸಿಕೊಟ್ಟಿದ್ದೇನೆ ಎಂದರು.ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಭಾರತೀಶ್ ಮಾತನಾಡಿ, ಕಳೆದ 5 ವರ್ಷಗಳಿಂದ ಕಾಂಗ್ರೆಸ್ ಪಕ್ಷವು ಜಾತಿಗಳ ನಡುವೆ ಸಂಘರ್ಷದ ವಾತಾವರಣ ನಿರ್ಮಿಸಿದ್ದು, ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ದೂರಿದರು. ಕೇರಳ ರಾಜ್ಯದ ಬಿ.ಜೆ.ಪಿ ಮುಖಂಡ ಬೇಬಿ ಮಾತನಾಡಿದರು. ಸಭೆಂiÀiಲ್ಲಿ ಬಿ.ಜೆ.ಪಿ ತಾಲೂಕು ಅಧ್ಯಕ್ಷ ಅರುಣ್ ಭೀಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ ಲೊಕೇಶ್, ಮಾಜಿ ಜಿ.ಪಂ ಅಧ್ಯಕ್ಷೆ ಶರಿನ್ ಸುಬ್ಬಯ್ಯ, ಸ್ಥಾನೀಯ ಸಮಿತಿ ಅಧ್ಯಕ್ಷ ನಾಣಯ್ಯ, ಮುಖಂಡರಾದ ಅನಿಲ್ ಶೆಟ್ಟಿ, ಆನಂದ, ಕಿಶೋರ್, ಕೆ.ಪಿ ಪ್ರಭಾಕರ್, ಹರಿದಾಸ್ ಇನ್ನಿತರರು ಇದ್ದರು.