ಕುಶಾಲನಗರ, ಏ. 29: ಕುಶಾಲನಗರ ಪತ್ರಕರ್ತರ ಮನೆಯಿಂದ ಕಳವು ಮಾಡಿದ್ದ ದ್ವಿಚಕ್ರ ವಾಹನ ಚೋರರನ್ನು ಕುಶಾಲನಗರ ಪೊಲೀಸರು ಬಂಧಿಸಿ ಬೈಕ್ ವಶಪಡಿಸಿ ಕೊಂಡಿದ್ದಾರೆ. ಸೋಮವಾರಪೇಟೆಯ ಹಾನಗಲ್ ಗ್ರಾಮದ ಟಿವಿ ಮೆಕಾನಿಕ್ ಎ.ಸಿ.ರಾಯ್ ಮತ್ತು ರೇಂಜರ್ ಬ್ಲಾಕ್ ನಿವಾಸಿ ಬೈಕ್ ಮೆಕಾನಿಕ್ ಶಂಷುದ್ದಿನ್ ಬಂಧಿತ ಆರೋಪಿಗಳು. ಕುಶಾಲನಗರ ಠಾಣಾಧಿಕಾರಿ ಜಗದೀಶ್ ರಾತ್ರಿ ಗಸ್ತಿನಲ್ಲಿದ್ದ ಸಂದರ್ಭ ಪಟ್ಟಣದ ಮಾರುಕಟ್ಟೆ ಬಳಿ ಸಂಶಯಾಸ್ಪದವಾಗಿ ಕಂಡುಬಂದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪತ್ರಕರ್ತ ಕೆ.ಎಸ್.ಮೂರ್ತಿ ಅವರ ಮನೆಯಿಂದ ಇತ್ತೀಚೆಗೆ ಬೈಕ್ ಕಳವಾಗಿದ್ದು ಈ ಸಂಬಂಧ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ಪೊಲೀಸ್ ಅಧೀಕ್ಷಕರು ಹಾಗೂ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಕ್ಯಾತೆಗೌಡ, ಠಾಣಾಧಿಕಾರಿ ಜಗದೀಶ್ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆದಳದ ಸುರೇಶ್, ಮುಸ್ತಾಫ, ಸುಧೀಶ್‍ಕುಮಾರ್, ಉದಯ ಕುಮಾರ್, ಚಾಲಕರಾದ ಪ್ರವೀಣ್, ಸೈಬರ್ ಸೆಲ್‍ನ ರಾಜೇಶ್, ಗಿರೀಶ್ ಪಾಲ್ಗೊಂಡಿದ್ದರು.