ಮಡಿಕೇರಿ, ಮೇ 3: ಬಾಲಕಿಯೋರ್ವಳ ಮೇಲೆ ಅತ್ಯಾಚಾರವೆಸಗಿ ಆಕೆಯ ಹತ್ಯೆಗೆ ಯತ್ನಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಮುಡಿ ಬಾಳಾಜಿ ಗ್ರಾಮದ ಬಕ್ಕ ಜಂಕ್ಷನ್ ಸಮೀಪ ತೋಟವೊಂದರಲ್ಲಿ ದಿನಾಂಕ 23.8.2016ರಂದು ಸೀಗೆತೋಡು ಗ್ರಾಮದ ಪಂಜರಿ ಯರವರ ಸಿದ್ದಪ್ಪ ಎಂಬ ಆರೋಪಿ ಬಾಲಕಿಯೋರ್ವಳನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಅತ್ಯಾಚಾರವೆಸಗಿ ಜೀವ ಬೆದರಿಕೆಯೊಡ್ಡಿ ಹತ್ಯೆಗೆ ಯತ್ನಿಸಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಗೋಣಿಕೊಪ್ಪ ಪೊಲೀಸರು ಆರೋಪಿ ಸಿದ್ದಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಸಲ್ಲಿಸಿದ್ದರು.ಈ ಪ್ರಕರಣದ ವಿಚಾರಣೆ ನಡೆಸಿದ 3ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ಅವರು ರಸ್ತೆಯಲ್ಲಿ ಬಾಧಿತಳನ್ನು ಅಡ್ಡಗಟ್ಟಿ ಎಸಗಿದ ಅಪರಾಧಕ್ಕಾಗಿ 1 ತಿಂಗಳ ಸಾದಾ ಸಜೆ ಮತ್ತು ರೂ. 500 ದಂಡವನ್ನು, ಜೀವ ಬೆದರಿಕೆ ಒಡ್ಡಿದ ಅಪರಾಧಕ್ಕಾಗಿ 3 ವರ್ಷಗಳ ಕಠಿಣ ಸಜೆ ಮತ್ತು ರೂ. 2500 ದಂಡ, ಬಲತ್ಕಾರವಾಗಿ ಅತ್ಯಾಚಾರ ಮಾಡಿದ ಅಪರಾಧಕ್ಕಾಗಿ 10 ವರ್ಷಗಳ ಕಠಿಣ ಸಜೆ ಮತ್ತು ರೂ. 10,000 ದಂಡವನ್ನು ಹಾಗೂ ತೀವ್ರವಾಗಿ ಗಾಯಗೊಳಿಸಿ ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಗೆ ಒದ್ದ ಅಪರಾಧಕ್ಕಾಗಿ 8 ವರ್ಷಗಳ ಕಠಿಣ ಸಜೆ ಮತ್ತು ರೂ. 10,000 ದಂಡವನ್ನು ವಿಧಿಸಿದ್ದಾರೆ.

ಪಾವತಿಯಾಗುವ ದಂಡದ ಹಣದಲ್ಲಿ ರೂ. 20,000ವನ್ನು ನೊಂದವಳಿಗೆ ಪರಿಹಾರವಾಗಿ ನೀಡಲು ಆದೇಶಿದ್ದಾರೆ.

ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಎಂ. ಕೃಷ್ಣವೇಣಿ ವಾದಿಸಿದರು.