ಮಡಿಕೇರಿ, ಮೇ 3: ಕಳೆದ ಮೂರು ದಶಕಗಳಿಂದ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸುವದರೊಂದಿಗೆ, ನಿವೃತ್ತಿ ಹೊಂದಿರುವ ಆರು ಮಂದಿ ಪೊಲೀಸ್ ಸಹಾಯಕ ಸಬ್ ಇನ್ಸ್‍ಪೆಕ್ಟರ್‍ಗಳಿಗೆ, ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಬೀಳ್ಕೊಡಲಾಯಿತು.

ಪ್ರಧಾನಿ ನರೇಂದ್ರ ಮೋದಿ ಚಾಮರಾಜನಗರ ಜಿಲ್ಲೆಗೆ ಭೇಟಿ ಹಿನ್ನೆಲೆ ಅಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಎಸ್‍ಪಿ ರಾಜೇಂದ್ರ ಪ್ರಸಾದ್ ಅನುಪ ಸ್ಥಿತಿಯಲ್ಲಿ ಪ್ರಬಾರ ಅಧೀಕ್ಷಕ ಕೆ.ಎಸ್. ಸುಂದರರಾಜ್ ನೇತೃತ್ವದಲ್ಲಿ ಸಮಾರಂಭ ಏರ್ಪಡಿಸಲಾಗಿತ್ತು.

ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಎಎಸ್‍ಐ ಆಗಿದ್ದ ಕೆ.ಪಿ. ವಸಂತ್, ವೀರಾಜಪೇಟೆ ಗ್ರಾಮಾಂತರ ಠಾಣಾ ಎಎಸ್‍ಐ ವಿ.ವೈ. ಗಣೇಶ್, ಮಡಿಕೇರಿ ಗ್ರಾಮಾಂತರ ಠಾಣೆಯ ಎಎಸ್‍ಐ ಕೆ. ಕುಸುಮಾಧರ ಗೌಡ, ಜಿಲ್ಲಾ ಪೊಲೀಸ್ ಕಚೇರಿಯ ಗುಪ್ತದಳ ವಿಭಾಗದ ಎಎಸ್‍ಐ ಬಿ.ಎನ್. ತಿಮ್ಮಯ್ಯ ಹಾಗೂ ಜಿಲ್ಲಾ ಸಶಸ್ತ್ರ ದಳ ಎಎಸ್‍ಐಗಳಾದ ಸಿ.ಸಿ. ಕಾವೇರಪ್ಪ, ಮತ್ತು ಬಿ.ಎನ್. ಗಂಗಾಧರ್ ನಿವೃತ್ತಿಯೊಂದಿಗೆ ಬೀಳ್ಕೊಡುಗೆ ಸ್ವೀಕರಿಸಿದರು. ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ನಿವೃತ್ತರಿಗೆ ಶುಭ ಹಾರೈಸಿದರು.