ಮಡಿಕೇರಿ, ಮೇ 3: ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳಿನ ಕಂತೆಯನ್ನೇ ಬಿಚ್ಚಿಡುತ್ತಿದ್ದಾರೆ ಎಂದು ಕಾಂಗ್ರೆಸ್‍ನ ಮಡಿಕೆÉೀರಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವೆಂಕಪ್ಪ ಗೌಡ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 2 ಕೋಟಿ ಉದ್ಯೋಗವನ್ನು ಸೃಷ್ಟಿಸುವ ಬಿಜೆಪಿಯ ಭರವಸೆ ಹುಸಿಯಾಗಿದ್ದು, ಇದರಿಂದ ಬೇಸತ್ತಿರುವ ಯುವ ಮತದಾರರು ಈ ಬಾರಿ ಬಿಜೆಪಿಯಿಂದ ದೂರ ಉಳಿದಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರುಗಳು ಜೊತೆಯಾಗಿ ವಿಮಾನದಲ್ಲಿ ತೆರಳಿರುವ ಬಗ್ಗೆ ದಾಖಲೆ ಇದೆಯೆಂದು ಕಾಂಗ್ರೆಸ್ ಹೇಳಿದ ಬೆನ್ನಲ್ಲೆ, ಇದು ನಿಜವೆಂದು ಪ್ರಧಾನಿ ಮೋದಿ ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳುವ ಮೂಲಕ ಪರೋಕ್ಷವಾಗಿ ಸಾಬೀತು ಪಡಿಸಿದ್ದಾರೆ. ಅಲ್ಲದೆ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿಯ ಬಗ್ಗೆ ಸಂದೇಶ ನೀಡಿದ್ದಾರೆ ಎಂದು ಟೀಕಿಸಿದರು.

ಕೇವಲ ವಾಚ್‍ವೊಂದನ್ನು ನೆಪವಾಗಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಲಾಗುತ್ತಿದೆ.

ಆದರೆ, ಬಿಜೆಪಿ ಆಡಳಿತವಿರುವ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ವಿವಿಧ ಹಗರಣಗಳಲ್ಲಿ ಸಿಲುಕಿಕೊಂಡಿರುವದನ್ನು ಬಿಜೆಪಿ ಮರೆತಿದೆಯೆಂದು ಅವರು ಆರೋಪಿಸಿದರು. ಕಳೆದ 5 ವರ್ಷಗಳ ಕಾಲ ಸುಭದ್ರ ಸರ್ಕಾರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಸೂಯೆಯಿಂದ ಬಿಜೆಪಿ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿರುವ ಯುವ ಕಾರ್ಯಕರ್ತರಲ್ಲಿ ರಣಉತ್ಸಾಹ ಕುಂದಿ ಹೋಗಿದ್ದು, ಇದಕ್ಕೆ ನಿರುದ್ಯೋಗ ಸಮಸ್ಯೆ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವೆ ಕಾರಣವೆಂದು ವೆಂಕಪ್ಪ ಗೌಡ ಅಭಿಪ್ರಾಯಪಟ್ಟರು.

ಜಿ.ಪಂ ಸದಸ್ಯ ಲತೀಫ್ ಮಾತನಾಡಿ, ಜೆಡಿಎಸ್ ಬಿಜೆಪಿಯೊಂದಿಗೆ ಕೈ ಜೋಡಿಸಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‍ನ ಹೆಚ್.ಎಸ್. ಚಂದ್ರಮೌಳಿ ಅವರ ಸೋಲಿಗೆ ಕಾರಣವಾಗಿದೆ ಎಂದು ಆರೋಪಿಸಿದರು. ಕಳೆದ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಜೆಡಿಎಸ್ ಪರವಾಗಿದ್ದರು. ಆದರೆ, ಅಲ್ಪಸಂಖ್ಯಾತರಿಗಾಗಿ ಜೆಡಿಎಸ್ ಏನು ಮಾಡಿದೆ ಎಂದು ಪ್ರಶ್ನಿಸಿದರು.

ಸಂಘ ಪರಿವಾರದ ಕಾರ್ಯಕರ್ತರೆ ಮಡಿಕೆÉೀರಿ ಶಾಸಕರನ್ನು ಸೋಲಿಸಲು ಮುಂದಾಗಿದ್ದಾರೆ. ಜೆಡಿಎಸ್‍ನ ಮೊಸಳೆ ಕಣ್ಣೀರಿಗೆ ಅಲ್ಪಸಂಖ್ಯಾತರು ಮರುಳಾಗುವದಿಲ್ಲವೆಂದು ತಿಳಿಸಿದ ಲತೀಫ್ ಶೇ.5 ರಷ್ಟು ಕೂಡ ಅಲ್ಪಸಂಖ್ಯಾತರ ಮತಗಳು ಜೆಡಿಎಸ್‍ಗೆ ಬೀಳುವದಿಲ್ಲವೆಂದು ವ್ಯಂಗ್ಯವಾಡಿದರು.

ಮತ್ತೋರ್ವ ಪ್ರಮುಖರಾದ ವಿರೂಪಾಕ್ಷಯ್ಯ ಮಾತನಾಡಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಳಂಬವಾದರೂ ಈಗಾಗಲೆ ಕಾಂಗ್ರೆಸ್ ಪಕ್ಷ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲಪಿದೆಯೆಂದು ಸಮರ್ಥಿಸಿಕೊಂಡರು.

ಗೋಷ್ಠಿಯಲ್ಲಿ ಮಡಿಕೆÉೀರಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಯು. ಅಬ್ದುಲ್ ರಜಾಕ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ ಹಾಗೂ ಪ್ರಮುಖರಾದ ಹನೀಫ್ ಉಪಸ್ಥಿತರಿದ್ದರು.