ಮಡಿಕೇರಿ, ಮೇ 3: ಭಾರತದ ಸಂಸ್ಕøತಿ ವಿಶ್ವದಲ್ಲೇ ಶ್ರೇಷ್ಠ ಸಂಸ್ಕøತಿ ಯಾಗಿದ್ದು, ಕ್ರೀಡೆ ಹಾಗೂ ಯೋಗ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯವೆಂದು ಬೆಂಗಳೂರಿನ ಶಿವಬಾಲಯೋಗಿ ಮಂದಿರದ ಶ್ರೀ ವಿಶ್ವಾಮಿತ್ರ ಸ್ವಾಮೀಜಿ ಹೇಳಿದರು.

ವಾಂಡರರ್ಸ್ ಕ್ರೀಡಾ ಕ್ಲಬ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ 24 ನೇ ವರ್ಷದ ಉಚಿತ ಕ್ರೀಡಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೆತ್ತ ತಾಯಿಯನ್ನು ಪೂಜಿಸುವ ಮತ್ತು ಗುರು ಹಿರಿಯರನ್ನು ಗೌರವಿಸುವ ಗುಣ ಹಾಗೂ ಸಂಸ್ಕøತಿ ಭಾರತೀಯರಲ್ಲಿದ್ದು, ಇದು ಇತರ ದೇಶಗಳಿಗೆ ಮಾದರಿಯಾಗಿದೆ ಎಂದರು. ಕ್ರೀಡೆ ಮತ್ತು ಯೋಗಾಭ್ಯಾಸ ದೈಹಿಕ ಬೆಳವಣಿಗೆ ಹಾಗೂ ಮಾನಸಿಕ ಪ್ರಬುದ್ಧತೆಗೆ ಸಹಕಾರಿ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಂತರ ರಾಷ್ಟ್ರೀಯ ಹಿರಿಯ ಹಾಕಿ ಆಟಗಾರ ಎಂ.ಎಸ್. ಮೊಣ್ಣಪ್ಪ ಅವರು ಕೊಡಗಿನ ಖ್ಯಾತ ಕ್ರೀಡಾ ತರಬೇತುದಾರ ದಿ. ಸಿ.ವಿ. ಶಂಕರ್ ಅವರನ್ನು ಸ್ಮರಿಸಿಕೊಂಡರು. ನಾನು ಭಾರತ ತಂಡದಲ್ಲಿ ಸ್ಥಾನ ಪಡೆಯ ಬೇಕಾದರೆ ಗುರುಗಳಾದ ಶಂಕರ್ ಅವರು ನೀಡಿದ ಸ್ಫೂರ್ತಿಯೇ ಕಾರಣವೆಂದು ತಿಳಿಸಿದರು.

ಮತ್ತೊಬ್ಬ ಕ್ರೀಡಾಪಟು ಎಂ.ಎಸ್. ಬೋಜಣ್ಣ ಮಾತನಾಡಿ, ಕ್ರೀಡೆ ನನಗೆ ಜೀವನದ ಅನುಭವ ಮತ್ತು ಪಾಠವನ್ನು ಕಲಿಸಿದೆ. ಈ ರೀತಿಯ ಶಿಬಿರಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸತತ ಪರಿಶ್ರಮದಿಂದ ಕ್ರೀಡಾ ಪ್ರತಿಭೆಗಳು ಕ್ರೀಡಾಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು.

ಒಂದು ತಿಂಗಳ ಕಾಲ ನೂರಕ್ಕೂ ಅಧಿಕ ಮಂದಿ ಬಾಲಕÀ, ಬಾಲಕಿಯರಿಗೆ ಪ್ರತಿದಿನ ಬೆಳಗ್ಗೆ 6.30 ರಿಂದ 9 ಗಂಟೆಯವರೆಗೆ ತರಬೇತಿ ನೀಡಲಾಯಿತು. ಶಿಬಿರದಲ್ಲಿ ಯೋಗ, ಪ್ರಾಣಾಯಾಮ, ಹಾಕಿ, ಅಥ್ಲೆಟಿಕ್ಸ್ ಇನ್ನಿತರ ಕ್ರೀಡಾ ಚಟುವಟಿಕೆಗಳ ಬಗ್ಗೆ ಮಾಹಿತಿ ಒದಗಿಸಲಾಯಿತು.

ಕಳೆದ 24 ವರ್ಷಗಳಿಂದ “ಇದು ನಾವು ಸಲ್ಲಿಸುವ ಸೇವೆ” ಎಂಬ ಘೋಷವಾಕ್ಯದೊಂದಿಗೆ ಯೋಗ, ಪ್ರಾಣಾಯಾಮವನ್ನು ಎಸ್.ಟಿ. ವೆಂಕಟೇಶ್ ಹಾಗೂ ಹಾಕಿ ಆಟದ ಕೌಶಲ್ಯಗಳನ್ನು ಶ್ಯಾಂ ಪೂಣಚ್ಚ, ಲಕ್ಷ್ಮಣ್‍ಸಿಂಗ್, ಅಶೋಕ್ ಅಯ್ಯಪ್ಪ, ಗಣೇಶ್ ಮತ್ತು ಕೋಟೆರ ಮುದ್ದಯ್ಯ, ಕೈ ಬರಹ ಹಾಗೂ ಚಿತ್ರ ಕಲೆಯನ್ನು ಪ್ರಮೀಳಾ ಸಿಂಗ್ ಅವರುಗಳು ಶಿಬಿರಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಿದರು.

ಕೊಡಗಿನ ಕ್ರ್ರೀಡಾ ಭೀಷ್ಮ ಎಂದು ಖ್ಯಾತಿಗಳಿಸಿರುವ ಹಿರಿಯ ತರಬೇತುದಾರ ದಿ. ಸಿ.ವಿ. ಶಂಕರ್ ಅವರ ಜನ್ಮದಿನವಾದ ಏ. 1 ರಂದು ಆರಂಭಗೊಂಡ ಶಿಬಿರ ಮೇ 1 ರಂದು ಸಮಾರೋಪಗೊಂಡಿತು. ಸುಮಾರು 86 ಶಿಬಿರಾರ್ಥಿಗಳಿಗೆ ಕೋಟೆಬೆಟ್ಟಕ್ಕೆ ಚಾರಣವನ್ನು ಕೂಡ ಹಮ್ಮ್ಮಿಕೊಳ್ಳಲಾಗಿತ್ತು. ಶಿಬಿರಾರ್ಥಿಗಳಿಗೆ ಪ್ರತಿ ದಿನ ಹಾಲು, ಮೊಟ್ಟೆ, ಬ್ರೆಡ್, ಬಾಳೆ ಹಣ್ಣುಗಳನ್ನು ನೀಡಲಾಗುತ್ತಿತ್ತು.

ಈ ಬಾರಿ ಸಿ.ವಿ. ಶಂಕರ್ ಟ್ರೋಫಿಯನ್ನು ವಾಂಡರರ್ಸ್ ಬಾಲಕಿಯರು ಹಾಗೂ ಬಿ.ಕೆ. ಸುಬ್ಬಯ್ಯ ಟ್ರೋಫಿಯನ್ನು ಕುಶಾಲನಗರ ಕ್ಲಬ್‍ನ ಬಾಲಕರು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಎಸ್.ಟಿ. ವೆಂಕಟೇಶ್, ಶ್ಯಾಂ ಪೂಣಚ್ಚ, ಅಶೋಕ್ ಅಯ್ಯಪ್ಪ, ಗಣೆÉೀಶ್, ಲಕ್ಷ್ಮಣ್ ಸಿಂಗ್, ಮಹಮ್ಮದ್ ಆಸಿಫ್, ಪೈಕೇರ ಕಾಳಯ್ಯ ಪಾರ್ಥ ಚಂಗಪ್ಪ , ಮುದ್ದಯ್ಯ ಅರುಣ್ ಸ್ಟೋರ್ಸ್‍ನ ಮಾಲೀಕ ಅರುಣ್ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ವೆಂಕಟೇಶ್ ನಿರೂಪಿಸಿ, ಶೇಖರ್ ಸೋಮಣ್ಣ ಸ್ವಾಗತಿಸಿದರು, ತುಷಾರ್ ವಂದಿಸಿದರು.