ಸಿದ್ದಾಪುರ, ಮೇ 5: ಕಾಡಾನೆ-ಮಾನವ ಸಂಘರ್ಷವನ್ನು ಮತ್ತು ರೈತರಿಗೆ ಬೆಳೆ ನಾಶದಿಂದ ಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಉಚ್ಛ ನ್ಯಾಯಾಲಯ ನೀಡಿದ ಆಜ್ಞೆಯನ್ನು ಪಾಲಿಸಲು ಅರಣ್ಯ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಜಿಲ್ಲಾ ರೈತರು ಮತ್ತು ಕಾರ್ಮಿಕರ ಹೋರಾಟ ಸಮಿತಿಯ ಕಾನೂನು ಸಲಹೆಗಾರ ಕೆ.ಬಿ. ಹೇಮಚಂದ್ರ ಆರೋಪಿಸಿದ್ದಾರೆ.ಸಣ್ಣ ಬೆಳೆಗಾರರ ಸಂಘದ ಸಭಾಂಗಣದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸುವಂತೆ ಒತ್ತಾಯಿಸಿ ಜಿಲ್ಲೆಯ ವಿವಿಧ ಸಂಘಟನೆ ಗಳೊಂದಿಗೆ ಮಡಿಕೇರಿಯಲ್ಲಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ಹಮ್ಮಿಕೊಳ್ಳ ಲಾಗಿದ್ದ ಪ್ರತಿಭಟನೆಯ ಬಳಿಕ ಕಾಡಾನೆಗಳು ಕಾಫಿ ತೋಟಗಳಿಗೆ ಲಗ್ಗೆ ಇಡದಂತೆ ಮತ್ತು ಪರಿಹಾರದ ಹಣ ಸೇರಿದಂತೆ ಕೃಷಿಕರ ರಕ್ಷಣೆಗೆ ಒತ್ತಾಯಿಸಿ 12 ಬೇಡಿಕೆಗಳನ್ನು ಈಡೇರಿಸುವದಾಗಿ ಅರಣ್ಯ ಅಧಿಕಾರಿಗಳು ಭರವಸೆ ನೀಡಿದರು. ಅಂದು ಕೇವಲ ಪ್ರತಿಭಟನೆಯನ್ನು ಹಿಂಪಡೆಯುವ ಉದ್ದೇಶದಿಂದ ಪ್ರತಿಭಟನಾಕಾರರ ಕಣ್ಣೊರೆಸುವ ತಂತ್ರವನ್ನು ಅರಣ್ಯ ಇಲಾಖೆ ಕೈಗೊಂಡಿತು ಎಂದು ಅವರು ಆರೋಪಿಸಿದರು. 12 ಬೇಡಿಕೆಗಳ ಪೈಕಿ ಅರಣ್ಯ ಇಲಾಖೆ ಸಮಸ್ಯೆಗೆ ಪರಿಹಾರವಾಗಿ ಯಾವದೇ ಕಾರ್ಯ ಕ್ರಮಗಳನ್ನು ರೂಪಿಸಿರುವದಿಲ್ಲ ಎಂದು ಹೇಳಿದ ರೈತ ಸಂಘದ ಸದಸ್ಯರು ಇಲಾಖೆಯ ಕ್ರಮವನ್ನು ಖಂಡಿಸಿದರು. ಉಚ್ಛ ನ್ಯಾಯಾ ಲಯದ ಮುಖ್ಯ ನ್ಯಾಯಾಧೀಶರು ರಿಟ್ ಸಂಖ್ಯೆ 40032/12ಕ್ಕೆ ಸಂಬಂಧಿಸಿದಂತೆ ಅರಣ್ಯ ಸಂರಕ್ಷಣೆ ಗಾಗಿ ಮತ್ತು ಕಾಡಾನೆಗಳ ನಿಯಂತ್ರಣ ಕ್ಕಾಗಿ ಪರೋಕ್ಷವಾಗಿ ಮತ್ತು ಕಡ್ಡಾಯವಾಗಿ ಪಾಲಿಸಬೇಕಾದ 17 ನಿರ್ದೇಶನಗಳನ್ನು ನೀಡಲಾಗಿದ್ದು, ಅರಣ್ಯ ಅಧಿಕಾರಿಗಳು ಯಾವದೇ ಕ್ರಮ ಕೈಗೊಳ್ಳದ ಕಾರಣ ಅದು ಸ್ಪಷ್ಟ ಉಲಂಘನೆ ಆಗಲಿದ್ದು ಸಮಿತಿಯ ನೇತೃತ್ವದಲ್ಲಿ ಕಾನೂನು ಸಮರಕ್ಕೆ ಮುಂದಾಗುವದಾಗಿ ಸಂಘಟನೆಯ ಗೌರವಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತಿಳಿಸಿದರು. ಈ ಸಂಬಂಧ ತಾ. 25 ರಂದು ಜಿಲ್ಲಾಧಿಕಾರಿಗಳು, ಅರಣ್ಯ ಅಧಿಕಾರಿ ಗಳು ಸೇರಿದಂತೆ ಸಂಬಂಧಿಸಿದ ಪ್ರಮುಖರನ್ನು ಭೇಟಿ ಮಾಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವದಾಗಿ ಎಚ್ಚರಿಸಿದ್ದಾರೆ.

ಸ್ಪಷ್ಟಪಡಿಸಬೇಕು: ಮುಂಬರುವ ವಿಧಾನಸಭಾ ಚುಣಾವಣೆಯಲ್ಲಿ ಜಿಲ್ಲೆಯಿಂದ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿ ರುವವರು ಜಿಲ್ಲೆಯ ಜ್ವಲಂತ ಸಮಸ್ಯೆ ಕಾಡಾನೆ ಹಾವಳಿ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ಪ್ರವೀಣ್ ಬೋಪಯ್ಯ, ಎ.ಬಿ. ವಿಕ್ರಂ ಬಿದ್ದಪ್ಪ, ಕೆ.ಎನ್. ಚಂಗಪ್ಪ, ಎ.ಎನ್. ಅಶೋಕ, ಎಂ.ಪಿ. ಮಾಚಯ್ಯ, ನವೀನ್ ಮೇದಪ್ಪ, ಸುಜಯ್ ಬೋಪಯ್ಯ, ಪಾಂಡಂಡ ರಾಜ ಗಣಪತಿ ಸೇರಿದಂತೆ ಇತರರು ಹಾಜರಿದ್ದರು.