ಬೆಂಗಳೂರು, ಮೇ 7: ಕೇಂದ್ರ ಸಾಹಿತ್ಯ ಅಕಾಡೆಮಿಯ ಮಹತ್ವದ ಕನ್ನಡ ಸಂಚಾಲನಾ ಸಮಿತಿ ಸಭೆ ಅಕಾಡೆಮಿಯ ಅಧ್ಯಕ್ಷ ಡಾ. ಚಂದ್ರಶೇಖರ್ ಕಂಬಾರರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿರುವ ಪ್ರಾಂತೀಯ ಕಚೇರಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಪುಸ್ತಕ ಪ್ರಕಟಣೆ ಮತ್ತು ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯಿತು. ಮೊದಲ ಸಭೆ ದೆಹಲಿಯಲ್ಲಿ ನಡೆದಿದ್ದು, ಕಾರ್ಯಕ್ರಮಗಳಿಗೆ ಅಂತಿಮ ರೂಪ ಕೊಡುವದು ಈ ಸಭೆಯ ಉದ್ದೇಶವಾಗಿತ್ತು.

ಕೊಡಗಿನ ಆದಿಕವಿ ಹರದಾಸ ಅಪ್ಪಚ್ಚಕವಿಗೆ 150 ವರ್ಷದ ಜನ್ಮ ವರ್ಷದ ಈ ಸಂದಭರ್Àದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕವಿಗೆ ಗೌರವಪೂರ್ಣ ನಮನ ಸಲ್ಲಿಸಲು ನಿರ್ಧರಿಸಿದೆ. ಅಪ್ಪಚ್ಚಕವಿ ಕೊಡವ ಭಾಷೆಯಲ್ಲಿ ಬರೆದಿರುವ ನಾಲ್ಕು ನಾಟಕಗಳನ್ನು ಈ ಹಿಂದೆ ಡಾ. ಐ.ಮಾ. ಮುತ್ತಣ್ಣ ಕನ್ನಡಕ್ಕೆ ಭಾಷಾಂತರ ಮಾಡಿದ್ದು, ಈ ಕನ್ನಡ ಅನುವಾದದ ನಾಟಕಗಳ ಸಂಕಲನವನ್ನು ಪ್ರಕಟಿಸಲು ತಿರ್ಮಾನಿಸಲಾಯಿತು. ಇದನ್ನು ಮುಂದಿನ ವರ್ಷಗಳಲ್ಲಿ ಇತರೆ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗುವದು.

ಅಪ್ಪಚ್ಚಕವಿಯ ಬದುಕು-ಬರಹದ ಜೀವನ ಚರಿತ್ರೆಯನ್ನು ಇಂಗ್ಲೀಷ್ ಸೇರಿದಂತೆ ಭಾರತೀಯ 7 ಭಾಷೆಗಳಲ್ಲಿ ಪ್ರಕಟಿಸಲು ತಿರ್ಮಾನಿಸಲಾಯಿತು. ಸೆಪ್ಟಂಬರ್ ತಿಂಗಳಿನಲ್ಲಿ ಮಡಿಕೇರಿಯಲ್ಲಿ ಅಪ್ಪಚ್ಚಕವಿಯ 150ನೇ ಜನ್ಮೋತ್ಸವ ಮತ್ತು ಎರಡು ದಿನಗಳ ವಿಚಾರ ಸಂಕಿರಣ ನಡೆಸುವದು, ಈ ಸಂದರ್ಭದಲ್ಲಿ ಈ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವದು. ಭಾರತದ ಈಶಾನ್ಯ ರಾಜ್ಯಗಳ ಬುಡಕಟ್ಟು ಜಾನಪದ ಸಂಸ್ಕøತಿ ಮತ್ತು ಕೊಡಗಿನ ಕುಡಿಯರು, ಎರವರು, ಜೇನುಕುರುಬರು, ಕೊಡವರ ಬುಡಕಟ್ಟು ಜಾನಪದ ಸಂಸ್ಕøತಿಯ ಮಿಲನ-ಸಂವಾದ ಕಾರ್ಯ ಕ್ರಮಗಳನ್ನು ಕೊಡಗು ಮತ್ತು ಈಶಾನ್ಯ ರಾಜ್ಯಗಳ ಒಂದು ಕಡೆ ನಡೆಸುವಂತೆ ಯೋಜನೆ ರೂಪಿಸಲಾಗುವದು.

ಕೊಡವ ಮತ್ತು ತುಳು ಭಾಷೆಗೆ ಭಾರತದ ಸಂವಿಧಾನದ 8ನೇ ಪರಿಛೇದದಲ್ಲಿ ಮಾನ್ಯತೆ ಸಿಗಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಸಲ್ಲಿಸಲು ಕ್ರಮವಹಿಸುವದು. ಈ ಬಗ್ಗೆ ಸೂಕ್ತ ದಾಖಲೆ ಸಂಗ್ರಹಿಸುವ ಜವಾಬ್ದಾರಿಯನ್ನು ಸದಸ್ಯ ಅಡ್ಡಂಡ ಕಾರ್ಯಪ್ಪ ಅವರಿಗೆ ವಹಿಸಲಾಯಿತು.

ಈ ಸಭೆಯಲ್ಲಿ ಸಮಿತಿ ಸಂಚಾಲಕ ಕವಿ ಡಾ. ಸಿದ್ದಲಿಂಗಯ್ಯ, ಖ್ಯಾತ ಸಾಹಿತಿ ಡಾ. ಸರೂಜ್ ಕಾಟ್ಕರ್, ದೆಹಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಡಾ. ಹೆಚ್.ಎಸ್. ಶಿವಪ್ರಕಾಶ್, ಮಧ್ಯಪ್ರದೇಶ ಇಂದಿರಾಗಾಂಧಿ ಬುಡಕಟ್ಟು ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಪೊ. ಟಿ.ವಿ.ಕುಲಕರ್ಣಿ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಮನುಬಳಿಗಾರ್, ಸಾಹಿತಿಗಳಾದ ಪ್ರೊ| ಎಲ್.ಎನ್.ಮುಕುಂದ್‍ರಾಜ್, ಡಾ. ಪದ್ಮನಿ ನಾಗರಾಜ್, ಡಾ. ಬಾಳಾಸಾಹೇಬ್ ಲೋಕಾಪುರ್ ಭಾಗವಹಿಸಿದ್ದರು.