ಮಡಿಕೇರಿ, ಮೇ 7 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಿ.ಎಂ.ತಿಮ್ಮಯ್ಯ ಅವರು, ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ತಾವು ಶಾಸಕರಾದರೆ, ಸರ್ಕಾರಿ ಕಛೇರಿಗಳ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವದಾಗಿ ಭರವಸೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಸಲು ಅಧಿಕಾರಿಗಳು ಆಯಾ ಪ್ರದೇಶದಲ್ಲೆ ಇರುವದಕ್ಕೆ ಅನುಕೂಲವಾಗುವಂತೆ ವಸತಿ ಗೃಹಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವದೆಂದರು. ವಾಹನಗಳ ನಿಲುಗಡೆಗೆ ಸೂರು ನಿರ್ಮಾಣ, ಚಾಲಕನ ಮತ್ತು ಸಿಬ್ಬಂದಿಗಳ ಆರೋಗ್ಯ ರಕ್ಷಣೆÉಗೆ ಕ್ರಮ, ಜಿಲ್ಲೆಯ ಎಲ್ಲಾ ಪಟ್ಟಣಗಳಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ, ಕಂದಾಯ ಇಲಾಖೆಯ ದುರಾಡಳಿತಕ್ಕೆ ಮುಕ್ತಿ, ಮೂರ್ನಾಡಿನಲ್ಲಿ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ನಿರ್ಮಾಣ, ಮೂರ್ನಾಡು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವದು ಮತ್ತು ದಿನದ ಇಪ್ಪತ್ತನಾಲ್ಕು ಗಂಟೆಯೂ ವೈದ್ಯರು ಇರುವಂತೆ ನೋಡಿಕೊಳ್ಳುವದು, ವಲಸಿಗ ಕಾರ್ಮಿಕರಿಗಾಗಿ ಮನೆಗಳ ನಿರ್ಮಾಣ, ಸಣ್ಣ ವ್ಯಾಪಾರಸ್ಥರ ಸಂಕಷ್ಟಗಳಿಗೆ ಸ್ಪಂದನ, ಕುಶಾಲನಗರ, ಭಾಗಮಂಡಲ ತಾಲೂಕುಗಳ ರಚನೆಗೆ ಆದ್ಯತೆ, ಕಾವೇರಿ ನೀರಿನ ವಿವಾದ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ, ಸಮರ್ಪಕ ಮರಳು ನೀತಿಯ ಮೂಲಕ ಮರಳು ದಂಧೆಗೆ ಕಡಿವಾಣ, ಭೂ ಮಾಲೀಕರಿಗೆ ಮರದ ಹಕ್ಕನ್ನು ದೊರಕಿಸಿಕೊಡುವದು ಸೇರಿದಂತೆ ಅನೇಕ ಅಭಿವೃದ್ಧಿ ಪರ ಚಿಂತನೆಯನ್ನು ತಾವು ಹೊಂದಿರುವದಾಗಿ ಬಿ.ಎಂ.ತಿಮ್ಮಯ್ಯ ತಿಳಿಸಿದರು.

ಬೆನ್ ಗಣಪತಿ ಮಾತನಾಡಿ, ಬಿ.ಎ.ತಿಮ್ಮಯ್ಯ ಅವರು ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಇವರಿಗೆ ಮತದಾರರ ಬೆಂಬಲ ಅಗತ್ಯವೆಂದರು.