ಮಡಿಕೇರಿ, ಮೇ 8: ವಿಧಾನಸಭಾ ಚುನಾವಣಾ ಮತದಾನಕ್ಕೆ ಕೇವಲ ಮೂರು ದಿನ ಮಾತ್ರ ಬಾಕಿಯಿದೆ. ಈ ಸಂದರ್ಭ ಜಿಲ್ಲೆಯಲ್ಲಿ ದಿಢೀರಾಗಿ ಸುರಿಯುತ್ತಿರುವ ಹಿಂಗಾರು ಮಳೆಯಿಂದ ಜನರಲ್ಲಿ ಆತಂಕ ಮೂಡಿದೆ.ಎಲ್ಲ ಮತದಾರರನ್ನು ಭೇಟಿಯಾಗಲು ಸಾಧ್ಯವಿಲ್ಲ. ಅತ್ಯಲ್ಪ ಅವಧಿಯಿಂದ ಮೊದಲೇ ಬವಣೆಗೆ ಒಳಗಾಗಿದ್ದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಇದೀಗ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಚುನಾವಣಾ ಪ್ರಚಾರ ಸಭೆಗಳಿಗೂ, ಮನೆ ಮನೆಗೆ ತೆರಳಿ ಪ್ರಚಾರ ನಡೆಸುವದಕ್ಕೂ ಭಾರೀ ಮಳೆ ತೀವ್ರ ಅಡ್ಡಿಯುಂಟು ಮಾಡಿದೆ. ಇದಕ್ಕಿಂತ ಮಿಗಿಲಾಗಿ ಮತದಾನದ ದಿನವೂ ಇದೇ ರೀತಿ ಮಳೆ ಸುರಿದರೆ ಮತದಾನದ ಪ್ರಮಾಣ ತೀವ್ರ ಇಳಿಮುಖಗೊಳ್ಳಬಹುದು ಎನ್ನುವ ಭಯ ರಾಜಕೀಯ ಧುರೀಣರಲ್ಲಿ ತಲ್ಲಣ ಉಂಟುಮಾಡಿದೆ. ಹವಾಮಾನ ಇಲಾಖೆಯಂತೂ ಈ ಬಗ್ಗೆ ಯಾವದೇ ಮುನ್ನೆಚ್ಚರಿಕೆಯಾಗಲಿ, ಮುನ್ಸೂಚನೆಯಾಗಲಿ ನೀಡದಿದ್ದು ವ್ಯರ್ಥ ಇಲಾಖೆಯಾಗಿ ಪರಿಗಣಿತಗೊಂಡಿದೆ.