ಮಡಿಕೇರಿ, ಮೇ 8: ಇಲ್ಲಿನ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಇಂದು ದೇವಿಯ ಜಯಂತಿ ಉತ್ಸವ ನೆರವೇರಿತು. ಈ ಪ್ರಯುಕ್ತ ಮಹದೇವಪೇಟೆ ಕನ್ನಿಕಾ ಪರಮೇಶ್ವರಿ ಸನ್ನಿಧಿ ಹಾಗೂ ಬಸವೇಶ್ವರ ಸನ್ನಿಧಿಯವರೆಗೆ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.

ಬಳಿಕ ಶ್ರೀ ದೇವಿಗೆ ಪಂಚೋಪಚಾರಪೂಜೆ, ಉಯ್ಯಾಲೆ ಸೇವೆಯೊಂದಿಗೆ ಮಹಾಪೂಜೆ ಬಳಿಕ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಪ್ರಸಾದ, ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನೆ ಹಾಗೂ ಲಲಿತ ಸ್ತೋತ್ರ ಸಹಿತ ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು. ಅಧಿಕ ಭಕ್ತ ಜನತೆಯೊಂದಿಗೆ ದೇವಾಲಯ ಆಡಳಿತ ಮಂಡಳಿ ಪ್ರಮುಖರು ಸೇವೆಯಲ್ಲಿ ಪಾಲ್ಗೊಂಡಿದ್ದರು.