ಸೋಮವಾರಪೇಟೆ, ಮೇ 9: ದೇಶದ ಘನತೆಯನ್ನು ವಿಶ್ವಮಟ್ಟದಲ್ಲಿ ಪಸರಿಸುತ್ತಿರುವ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಭಾರತೀಯ ಜನತಾ ಪಾರ್ಟಿ ಜಾತೀಯತೆಗೆ ಸೀಮಿತವಾಗದೇ ಹಿಂದೂ ಸಮಾಜದ ಎಲ್ಲರೂ ಒಂದೇ ಎಂಬ ತತ್ವದಲ್ಲಿ ನಂಬಿಕೆಯಿಟ್ಟು, ಎಲ್ಲಾ ವರ್ಗದ ಎಲ್ಲರೊಂದಿಗೆ ಎಲ್ಲರ ವಿಕಾಸಕ್ಕಾಗಿ ಶ್ರಮಿಸಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮಾತ್ರ ಕೆಲವರಿಗೆ ಜಾತಿ ಜಾಗೃತವಾಗುತ್ತದೆ. ಬಿಜೆಪಿ ಪಕ್ಷ ದೇಶದ ಸಾಂಸ್ಕøತಿಕ ರಾಷ್ಟ್ರೀಯವಾದ ಮತ್ತು ರಾಷ್ಟ್ರೀಯತೆಯ ಪ್ರತಿಪಾದನೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಪಕ್ಷದಲ್ಲಿ ಎಂದಿಗೂ ಜಾತಿ ತಾರತಮ್ಯ ನಡೆದಿಲ್ಲ ಎಂದರು.

ಕೊಡವರು ಅಧಿಕವಿರುವ ವೀರಾಜಪೇಟೆಗೆ ಗೌಡ ಜನಾಂಗದ ಕೆ.ಜಿ. ಬೋಪಯ್ಯ ಹಾಗೂ ಗೌಡ ಜನಾಂಗದವರು ಅಧಿಕವಿರುವ ಮಡಿಕೇರಿ ಕ್ಷೇತ್ರಕ್ಕೆ ಕೊಡವ ಜನಾಂಗದ ಅಪ್ಪಚ್ಚು ರಂಜನ್ ಅವರುಗಳನ್ನು ಅಭ್ಯರ್ಥಿಯನ್ನಾಗಿಸಿದೆ. ರಾಷ್ಟ್ರೀಯತೆಯ ಸಂಕಲ್ಪ ಹಾಗೂ ಪಕ್ಷದ ಸಾಮಥ್ರ್ಯದಿಂದ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಚುನಾವಣೆಗಾಗಿಯೇ ಜಾತಿಯನ್ನು ಎಳೆದು ತರುವ ಕುತಂತ್ರಗಳು ನಡೆಯಲ್ಲ, ಇಂತಹ ಕುತಂತ್ರಗಳನ್ನು ಮೆಟ್ಟಿ ಬಿಜೆಪಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶಕ್ಕೆ ಮೋದಿ, ರಾಜ್ಯಕ್ಕೆ ಯಡಿಯೂರಪ್ಪ, ಕೊಡಗಿಗೆ ಬಿಜೆಪಿಯ ಅಪ್ಪಚ್ಚು ರಂಜನ್ ಮತ್ತು ಕೆ.ಜಿ. ಬೋಪಯ್ಯ ಎಂಬ ಅಭಿಪ್ರಾಯವಷ್ಟೇ ಮತದಾರರಲ್ಲಿದೆ. ಕೊಡಗಿನಲ್ಲಿ ಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್‍ವರೆಗೂ ಬಿಜೆಪಿ ಜಯಗಳಿಸಿದೆ. ಬಿಜೆಪಿಯ ಭದ್ರಕೋಟೆಯನ್ನು ಮತ್ತೊಮ್ಮೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ಸು ಕಾಣುತ್ತೇವೆ ಎಂದು ಪ್ರತಾಪ್ ಸಿಂಹ ನುಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಭಾರತೀಶ್ ಮಾತನಾಡಿ, ಶಾಸಕದ್ವಯರ ಅಭಿವೃದ್ಧಿ ಕಾರ್ಯ, ಪ್ರಧಾನಿ ಮೋದಿ ಅವರ ಜನಪರ ಯೋಜನೆಗಳಿಂದ ಬಿಜೆಪಿ ಜಯಗಳಿಸಲಿದೆ. ಅಮಿತ್ ಷಾ ಮತ್ತು ಸ್ಮøತಿ ಇರಾನಿಯಂತಹ ನಾಯಕರು ಕೊಡಗಿಗೆ ಆಗಮಿಸಿದ ಬೆನ್ನಲ್ಲೇ ಕಾರ್ಯಕರ್ತರಿಗೆ ಇನ್ನಷ್ಟು ಬಲ ಬಂದಿದೆ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್, ಬಿಜೆಪಿ ವಕ್ತಾರ ಕೆ.ಜಿ. ಸುರೇಶ್, ಪ್ರಮುಖರಾದ ಟಿ.ಕೆ. ರಮೇಶ್ ಅವರುಗಳು ಉಪಸ್ಥಿತರಿದ್ದರು.