ನಿಶ್ಚಿತಾರ್ಥ ಮಾಡಿಕೊಂಡ ನಟಿ ಅನು ಮಾಳೇಟಿರ ಬೆಂಗಳೂರು, ಮೇ 17: ಕನ್ನಡದ ನಟಿ ಅನು ಮಾಳೇಟಿರ ಜತೆ ಬಿಗ್ ಬಾಸ್ ಖ್ಯಾತಿಯ ಕ್ರಿಕೆಟಿಗ ಎನ್.ಸಿ. ಅಯ್ಯಪ್ಪ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದಂತೆ ಶುಭ ಸಮಾರಂಭ ನಡೆಯಿತು. ಮುಂದಿನ ವರ್ಷ ಕೊಡಗಿನ ವೀರಾಜಪೇಟೆಯಲ್ಲಿ ಈ ಜೋಡಿ ಮದುವೆಯಾಗಲಿದೆ. ನಿಶ್ಚಿತಾರ್ಥ ಸಮಾರಂಭದಲ್ಲಿ ಎರಡು ಕುಟುಂಬದ ಗುರು ಹಿರಿಯರು ಹಾಗೂ ಬಂಧುಗಳು ಹಾಜರಿದ್ದು ಅಯ್ಯಪ್ಪ ಹಾಗೂ ಅನು ಜೋಡಿ ಉಂಗುರವನ್ನು ಬದಲಿಸಿಕೊಂಡಿತು. ಅನು ಮಾಳೇಟಿರ ಅವರು ಕನ್ನಡದ ಕರ್ವ, ಕಥಾವಿಚಿತ್ರ, ಲೈಫ್ ಸೂಪರ್, ಪಾನಿಪುರಿ ಚಿತ್ರಗಳಲ್ಲಿ ನಟಿಸಿದ್ದಾರೆ.ಕಾಂಗ್ರೆಸ್ ನಾಯಕನಾಗಿ ಡಾ. ಈ. ಪರಮೇಶ್ವರ್ ಆಯ್ಕೆ

ಬೆಂಗಳೂರು, ಮೇ 17: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ. ಈ. ಪರಮೇಶ್ವರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇಂದು ಸಂಜೆ ಈಗಲ್ಟನ್ ರೆಸಾರ್ಟ್‍ನಲ್ಲಿ ನಡೆದ ಕಾಂಗ್ರೆಸ್‍ನ ಶಾಸಕಾಂಗ ಪಕ್ಷದ ಸಭೆಯಲ್ಲಿ ಪರಮೇಶ್ವರ್ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಸದ್ಯ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದ್ದು ಈ ಹಿನ್ನೆಲೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯ ಆಪರೇಷನ್ ಕಮಲದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಶಾಸಕರು ಸದ್ಯ ಈಗಲ್ಟನ್ ರೆಸಾರ್ಟ್‍ನಲ್ಲಿ ತಂಗಿದ್ದಾರೆ.

ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಮೇ 17: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕೂಡಲೇ ಬಿಜೆಪಿ ಸರ್ಕಾರ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಎಡಿಜಿಪಿ ಅಮರ್ ಕುಮಾರ್ ಪಾಂಡೆ ಹಾಗೂ ಡಿಐಜಿ ಸಂದೀಪ್ ಪಾಟೀಲ್ ಗುಪ್ತಚರ ಇಲಾಖೆಗೆ ವರ್ಗವಾಗಿದ್ದರೆ, ಡಿ. ದೇವರಾಜ್ ಅವರನ್ನು ಬೆಂಗಳೂರು ಕೇಂದ್ರ ವಿಭಾಗಕ್ಕೆ ಹಾಗೂ ಡಿಸಿಪಿ ಎಸ್. ಗಿರೀಶ್ ಅವರನ್ನು ಈಶಾನ್ಯ ವಿಭಾಗಕ್ಕೆ ವರ್ಗ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರನ್ನು ರಾಮನಗರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಆಗಿ ಸರ್ಕಾರ ವರ್ಗಾವಣೆ ಮಾಡಿದೆ. ಕಾಂಗ್ರೆಸ್ ಶಾಸಕರು ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್‍ನಲ್ಲಿ ಬಿಡಾರ ಹೂಡಿದ್ದಾರೆ. ರೆಸಾರ್ಟ್ ಪ್ರದೇಶ ರಾಮನಗರ ಜಿಲ್ಲಾ ವ್ಯಾಪ್ತಿಗೆ ಬರುತ್ತದೆ ವರ್ಗಾವಣೆಯು ತಕ್ಷಣದಿಂದಲೇ ಅನ್ವಯವಾಗುತ್ತದೆ ಎಂದು ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ (ಡಿಪಿಎಆರ್) ಅಧೀನ ಕಾರ್ಯದರ್ಶಿ ಎಸ್.ಕೆ. ನಾಗವೇಣಿ ಆದೇಶದಲ್ಲಿ ತಿಳಿಸಿದ್ದಾರೆ. ಚಾಲನಾ ಆದೇಶ ತಲುಪಿಲ್ಲ ಎಂದು ಮೂಲಗಳು ತಿಳಿಸಿವೆ. ಅಣ್ಣಾಮಲೈ ಅವರು 2016ರ ಆಗಸ್ಟ್ 4ರಂದು ಉಡುಪಿಯಿಂದ ಚಿಕ್ಕಮಗಳೂರಿಗೆ ವರ್ಗಾವಣೆಯಾಗಿ ಬಂದಿದ್ದರು.

ಜಯನಗರದಲ್ಲಿ ಜೂ.11 ರಂದು ಚುನಾವಣೆ

ಬೆಂಗಳೂರು, ಮೇ 17: ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ನಿಧನದಿಂದ ಮುಂದೂಡಿಕೆಯಾಗಿದ್ದ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಜೂ. 11 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಜೂ. 11 ರಂದು ಮತದಾನ ನಡೆಯಲಿದ್ದು, ಜೂನ್ 16 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ತಾ. 18 ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ತಾ. 25 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಕಾಂಗ್ರೆಸ್‍ನಿಂದ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಕಣದಲ್ಲಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಯಾರು ಎನ್ನುವದು ಇನ್ನೂ ಕೂಡ ಘೋಷಣೆಯಾಗಿಲ್ಲ.

ಬಿಜೆಪಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಬೆಂಗಳೂರು, ಮೇ 17: ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರ ರಚಿಸಿರುವದನ್ನು ವಿರೋಧಿಸಿ ವಕೀಲರೊಬ್ಬರು ಕರ್ನಾಟಕ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, 15 ದಿನದೊಳಗೆ ಬಹುಮತ ಸಾಬೀತು ಪಡಿಸಬೇಕಾಗಿದೆ. ಈ ಮಧ್ಯೆ, ವಕೀಲ ಎನ್.ಪಿ. ಅಮೃತೇಶ್ ಅವರು, ಶಾಸಕರ ರಾಜಿನಾಮೆ ಅಥವಾ ಅಡ್ಡ-ಮತದಾನ ಮಾಡುವ ಮೂಲಕ ಬಿಜೆಪಿ ಬಹುಮತ ಸಾಬೀತುಪಡಿಸಲು ಕೋರ್ಟ್ ಅವಕಾಶ ನೀಡಬಾರದು ಎಂದು ಪಿಐಎಲ್ ಸಲ್ಲಿಸಿದ್ದಾರೆ. ಸರ್ಕಾರ ರಚಿಸಲು ಬಿಜೆಪಿ ಆಹ್ವಾನ ನೀಡಿದ ರಾಜ್ಯಪಾಲ ವಜುಭಾಯಿ ವಾಲಾ ಅವರ ನಿರ್ಧಾರ ಸಂವಿಧಾನದ ಕಲಂ 10ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಿಐಎಲ್‍ನಲ್ಲಿ ಆರೋಪಿಸಲಾಗಿದೆ.

ಇತರ ರಾಜ್ಯಗಳಲ್ಲಿ ಗರಿಗೆದರಿದ ರಾಜಕಾರಣ

ಬೆಂಗಳೂರು, ಮೇ 17: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹಾಗೂ ರಾಜಕೀಯ ವಿದ್ಯಮಾನಗಳು ರಾಷ್ಟ್ರ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿವೆ. ಬಹುಮತಕ್ಕೆ ಅಗತ್ಯವಿರುವುದಕ್ಕಿಂತ 9 ಸ್ಥಾನ ಕೊರತೆಯಿದ್ದರೂ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿರುವ ರಾಜ್ಯಪಾಲರ ಕ್ರಮ ವಿವಿಧ ರಾಜ್ಯಗಳ ರಾಜಕೀಯ ಪಕ್ಷಗಳನ್ನು ಜಾಗೃತಗೊಳಿಸಿವೆ. ಗೋವಾ, ಬಿಹಾರ ಬಳಿಕ ಇದೀಗ ಮಣಿಪುರ, ಮೇಘಾಲಯ ರಾಜ್ಯಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷಗಳಾಗಿ ಹೊರಹೊಮ್ಮಿದ್ದ ಪಕ್ಷಗಳು ಅಧಿಕಾರಕ್ಕಾಗಿ ಕಸರತ್ತು ಆರಂಭಿಸಿವೆ ಮಣಿಪುರ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಐಬೊಬಿ ಸಿಂಗ್ ಮತ್ತು ಮೇಘಾಲಯ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಶುಕ್ರವಾರ ರಾಜ್ಯಪಾಲರನ್ನು ಭೇಟಿಯಾಗಲು ಸಮಯ ಕೇಳಿದ್ದಾರೆ. `ನಾವು ನಾಳೆ ರಾಜ್ಯಪಾಲರನ್ನು ಭೇಟಿಮಾಡಲು ಸಮಯ ಕೋರುತ್ತೇವೆ. ನಮ್ಮದು ಏಕೈಕ ದೊಡ್ಡ ಪಕ್ಷ ಮತ್ತು ಫಲಿತಾಂಶ ಪ್ರಕಟವಾದ ಕೂಡಲೇ ರಾಜ್ಯಪಾಲರನ್ನು ಭೇಟಿಯಾಗಿದ್ದೆವು. ಆದರೆ, ಸರ್ಕಾರ ರಚಿಸಲು ನಮ್ಮನ್ನು ಆಹ್ವಾನಿಸಿರಲಿಲ್ಲ. ಇತ್ತೀಚಿನ ವಿದ್ಯಮಾನಗಳ ಆಧಾರದ ಮೇಲೆ, ಬಿಜೆಪಿಗೆ ಅವಕಾಶ ಕೊಡಬಹುದಾದರೆ ನಮಗೇಕಿಲ್ಲ?' ಎಂದು ಮಣಿಪುರ ಮಾಜಿ ಮುಖ್ಯಮಂತ್ರಿ ಒಐ ಸಿಂಗ್ ಪ್ರಶ್ನಿಸಿದ್ದಾರೆ.

ರೂ. 13.5 ಲಕ್ಷ ಮೌಲ್ಯದ ಕಾಸ್ಮೆಟಿಕ್ ಡ್ರಗ್ಸ್ ವಶಕ್ಕೆ

ಬೆಂಗಳೂರು, ಮೇ 17: ಬ್ಯೂಟಿ ಪಾರ್ಲರ್‍ಗಳಲ್ಲಿ ಬಳಸಲ್ಪಡುವ ಚರ್ಮ ಬಿಳಿಯಾಗಿಸುವ ಕಾಸ್ಮೆಟಿಕ್ ಪೌಡರ್‍ನ್ನು ಅಕ್ರಮ ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗುಪ್ತಚರ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತನಿಂದ ರೂ. 13.5 ಲಕ್ಷ ಮೌಲ್ಯದ ಕಾಸ್ಮೆಟಿಕ್ ಡ್ರಗ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಥಾಯ್ ಲ್ಯಾಂಡ್ ಹಾಗೂ ಮಲೇಷಿಯಾದಿಂದ ತರಲಾಗುವ ಈ ಡ್ರಗ್ಸ್‍ಗಳನ್ನು ಬೆಂಗಳೂರಿನಿಂದ ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಸಾಗಾಟ ನಡೆಸಲಾಗುತ್ತಿತ್ತು. ಕಾಸ್ಮೆಟಿಕ್ಸ್ ಕ್ಲಿನಿಕ್ ಹಾಗೂ ಬ್ಯೂಟಿ ಪಾರ್ಲರ್‍ಗಳಲ್ಲಿ ವ್ಯಾಪಕವಾಗಿ ಬಳಕೆಯಾಗುವ ಇಂತಹಾ ಔಷಧಿಗಳು ಭಾರತದಲ್ಲಿ ಭಾರೀ ಬೇಡಿಕೆ ಹೊಂದಿದೆ. ಹೀಗಾಗಿ ಇಂತಹಾ ಡ್ರಗ್ಸ್‍ಗಳ ಕಳ್ಳಸಾಗಣೆ, ವ್ಯಾಪಾರ ಸತತವಾಗಿ ನಡೆಯುತ್ತಿರುತ್ತದೆ. ಬೆಂಗಳೂರಿನ ಜಯನಗರದ ಮನೆಯೊಂದರಲ್ಲಿ ಸಂಗ್ರಹಿಸಲಾಗಿದ್ದ ಇಂತಹಾ ಡ್ರಗ್ಸ್‍ನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಮೊಬೈಲ್ ಬಳಸುವದು ಅಪರಾಧವಲ್ಲ

ಕೊಚ್ಚಿ, ಮೇ 17: ವಾಹನ ಚಾಲನೆ ಮಾಡುವ ವೇಳೆ ಮೊಬೈಲ್ ಬಳಸುವದು ಅಪರಾಧವಲ್ಲ ಎಂದು ಕೇರಳ ಹೈಕೋರ್ಟ್ ಗುರುವಾರ ಹೇಳಿದೆ. ಕಾರು ಚಾಲನೆ ಮಾಡುತ್ತಿದ್ದ ವೇಳೆ ಮೊಬೈಲ್ ಬಳಸಿದ್ದ ತಮ್ಮ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದನ್ನು ಪ್ರಶ್ನಿಸಿ ಎಂ.ಜೆ. ಸಂತೋಷ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ವಾಹನ ಚಲಾಯಿಸುವ ವೇಳೆ ಮೊಬೈಲ್ ಬಳಸುವದರಿಂದ ಸಾರ್ವಜನಿಕರಿಗೆ ಹಾನಿ ಉಂಟಾಗದೇ ಹೋದಲ್ಲಿ, ಆರೋಪಿಯನ್ನು ದಂಡಿಸುವ ಅವಕಾಶ ಪೆÇಲೀಸ್ ಕಾಯ್ದೆ 118(ಇ)ಗೆ ಇಲ್ಲ ಎಂದು ಹೇಳಿದೆ. ವಾಹನ ಚಾಲನೆ ವೇಳೆ ಮೊಬೈಲ್ ಬಳಸಿದಲ್ಲಿ, ಪೆÇಲೀಸ್ ಕಾಯ್ದೆ 118(ಇ) ಸಾರ್ವಜನಿಕರಿಗೆ ಅಪಾಯ ಒಡ್ಡಿರುವ ಆರೋಪದಲ್ಲಿ ಜೈಲು ಶಿಕ್ಷೆ, ದಂಡ ಅಥವಾ ಇವರೆಡನ್ನೂ ವಿಧಿಸಲು ಅವಕಾಶಗಳಿದೆ.