ಮಡಿಕೇರಿ, ಮೇ 18: ಜಿಪ್ಸಿ ವಾಹನವೊಂದು ಸ್ಕೂಟರ್‍ಗೆ ಡಿಕ್ಕಿಯಾದ ಪರಿಣಾಮ ಸವಾರ ಶಿವಕುಮಾರ್ ಎಂಬಾತ ಗಂಭೀರವಾಗಿ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ಸಾಗಿಸಿರುವ ಘಟನೆ ಇಂದು ಸಂಜೆ ವೇಳೆ ಸಂಭವಿಸಿದೆ.

ಮಡಿಕೇರಿ ಸೋಮವಾರಪೇಟೆ ರಸ್ತೆಯ ಮೂರನೇ ಮೈಲು ಬಳಿ ಸ್ಕೂಟರ್‍ಗೆ ಎದುರಿನಿಂದ ಬಂದ ಜಿಪ್ಸಿ ಡಿಕ್ಕಿಯಾಗಿದೆ. ಮೂಲತಃ ಮೈಸೂರಿನವರಾದ ಮೂರನೆ ಮೈಲಿನಲ್ಲಿ ನೆಲೆಸಿದ್ದ ಶಿವಕುಮಾರ್ ರಸ್ತೆಗೆ ಎಸೆಯಲ್ಪಟ್ಟು, ಕೈ, ಕಾಲು ಮುರಿದಿವೆ. ತಲೆಗೆ ಪೆಟ್ಟಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿಗೆ ಸಾಗಿಸಲಾಗಿದೆ.ಸ್ಕೂಟರ್ ನಜ್ಜುಗುಜಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ನಗರಸಭಾ ಸದಸ್ಯೆ ಸಂಗೀತ ಪ್ರಸನ್ನ ಹಾಗೂ ಸ್ಥಳೀಯರು ಶಿವ ಕುಮಾರ್‍ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ನೆರವಾದರು. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.