ಭಾಗಮಂಡಲ, ಜೂ. 12: ಜಾಗಕ್ಕೆ ಸಂಬಂಧಿಸಿದ ದಾಖಲಾತಿ ಗಳನ್ನು ಮಾಡಿಕೊಡುವದಾಗಿ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂದಾಯ ಇಲಾಖೆಯ ಹಂಗಾಮಿ ನೌಕರ ಹೆಚ್.ಕೆ. ಗಣೇಶ್ ಎಂಬಾತ ಚೇರಂಬಾಣೆ ಬಳಿಯ ಬೇಂಗೂರು ನಿವಾಸಿ ಕೆ.ಪಿ. ಬಾಪೂಜಿ ಎಂಬವರಿಂದ ಅವರ ಜಾಗದ ದಾಖಲಾತಿಗಳನ್ನು ಮಾಡಿಕೊಡುವದಾಗಿ ಹಣ ಪಡೆದಿದ್ದ ಎನ್ನಲಾಗಿದ್ದು, ದಾಖಲಾತಿಗಳನ್ನು ಮಾಡಿಕೊಡದ ಹಿನ್ನೆಲೆಯಲ್ಲಿ ಬಾಪೂಜಿಯವರು ಭಾಗಮಂಡಲ ಠಾಣೆಗೆ ದೂರು ನೀಡಿದ್ದಾರೆ. ಸುಮಾರು 70 ಸಾವಿರದಷ್ಟು ಹಣವನ್ನು ಗಣೇಶ್ ಪಡೆದು ಕೊಂಡಿದ್ದುದಾಗಿ ಬಾಪೂಜಿ ದೂರಿನಲ್ಲಿ ತಿಳಿಸಿದ್ದಾರೆ.