ಶನಿವಾರಸಂತೆ, ಜೂ. 12: ಮದ್ಯವ್ಯಸನಿ ಪುತ್ರನೊಬ್ಬ ತಂದೆಯನ್ನೇ ಕತ್ತಿಯಿಂದ ಕಡಿದು ಕೊಲೆಗೈದ ಘಟನೆ ಸಮೀಪದ ಕೊಡ್ಲಿಪೇಟೆ ಹೋಬಳಿಯ ಚೆನ್ನಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.ಗ್ರಾಮದ ಕೂಲಿ ಕಾರ್ಮಿಕ ಬಸಪ್ಪ (70) ಕೊಲೆಯಾದ ವ್ಯಕ್ತಿ. ಈತನ ಕಿರಿಯ ಪುತ್ರ ಸಿ.ಬಿ. ಶಶಿಧರ್ ಕೊಲೆಗೈದ ಆರೋಪಿ. ದುಡಿಯದೇ ಸದಾ ಮನೆಯಲ್ಲೇ ಇರುತ್ತಿದ್ದ ಶಶಿಧರ್ ಕುಡಿಯಲು ಹಣಕ್ಕಾಗಿ ತಂದೆಯನ್ನು ಪೀಡಿಸಿ ಜಗಳವಾಡುತ್ತಿದ್ದ. ಎಂದಿನಂತೆ ಸೋಮವಾರವೂ ಕುಡಿತಕ್ಕೆ ಹಣ ಕೇಳಿದಾಗ ತಂದೆ ತಮ್ಮ ಬಳಿ ಹಣ ಇಲ್ಲ; ಕೂಲಿ ಕೆಲಸಕ್ಕೆ ಹೋಗು ಎಂದು ಹೇಳಿದ್ದೇ ಹತ್ಯೆಗೆ ಕಾರಣವಾಗಿದೆ. ಕತ್ತಿಯಿಂದ ತಂದೆಯ ಬಲಗಾಲಿನ ಮಂಡಿಯ ಹಿಂಭಾಗಕ್ಕೆ ಕಡಿದು ಓಡಿ ಹೋದ ಎಂದು ಹಿರಿಯ ಪುತ್ರ ಸಿ.ಬಿ. ಉಮೇಶ್ ದೂರಿನಲ್ಲಿ ತಿಳಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಘಟನೆಯ ಸ್ಥಳಕ್ಕೆ ಡಿವೈಎಸ್‍ಪಿ ಶ್ರೀನಿವಾಸಮೂರ್ತಿ ಹಾಗೂ ವೃತ್ತ ನಿರೀಕ್ಷಕ ನಂಜುಂಡೇಗೌಡ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹದ ಮರಣೋತ್ತರ ಪರೀಕ್ಷೆ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.