ಗೋಣಿಕೊಪ್ಪ ವರದಿ, ಜೂ. 12: ದಕ್ಷಿಣ ಕೊಡಗಿನ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸಲು ನಡೆಸುತ್ತಿರುವ ಅಕ್ರಮ ಸರ್ವೆ ಕಾರ್ಯದ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ವೀರಾಜಪೇಟೆ ಕ್ಷೇತ್ರ ಬಿಜೆಪಿ ಎಚ್ಚರಿಕೆ ನೀಡಿದೆ.

ಕಾನೂರು, ಕೋತೂರು ಸುತ್ತಮುತ್ತ ಈಗಾಗಲೇ ಅನಧಿಕೃತ ವಾಗಿ ಸರ್ವೆ ನಡೆಸಲಾಗುತ್ತಿದ್ದು, ಬೆಳೆಗಾರರು ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ವೀರಾಜಪೇಟೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮೈಸೂರು-ತಲಚೇರಿ ರೈಲ್ವೆ ಮಾರ್ಗ ಯೋಜನೆ ಬಗ್ಗೆ ಕೇಂದ್ರ ಸಂಸತ್‍ನಲ್ಲಿ ಕೂಡ ಚರ್ಚೆಗೆ ಬಂದು ಅಂತಹ ಯೋಜನೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

ವಿಧಾನಸೌಧದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಕೂಡ ಇದನ್ನು ವಿರೋಧಿಸಿದ್ದಾರೆ. ಆದರೂ ಇಂತಹ ಯೋಜನೆಯನ್ನು ಕೈಗೆತ್ತಿಕೊಂಡು ವಿರೋಧದ ನಡುವೆಯೂ ಕೃಷಿ ಭೂಮಿಯಲ್ಲಿ ಸರ್ವೆ ನಡೆಸುತ್ತಿರುವದು ಖಂಡನೀಯ. ಜಿಲ್ಲಾಧಿಕಾರಿ ಮೌನ ಮುರಿದು ಕ್ರಮಕ್ಕೆ ಮುಂದಾಗಲಿ ಎಂದು ಆಗ್ರಹಿಸಿದರು. ಬಿಜೆಪಿ ರೈತ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಅಳಮೇಂಗಡ ವಿವೇಕ್ ಮಾತನಾಡಿ, ಸರ್ವೆ ನಡೆಸುತ್ತಿರುವ ಸಿಬ್ಬಂದಿಗೆ ಮಾಹಿತಿ ಕೊರತೆ ಇದೆ. ಅಕ್ರಮವಾಗಿ ಕಾಫಿ ತೋಟಕ್ಕೆ ನುಗ್ಗುವದರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ. ಜಿಪಿಎಸ್ ಮೂಲಕ ಸರ್ವೆ ನಡೆಯುತ್ತಿರುವದರಿಂದ ಯಾವ ಕಡೆಗಳಲ್ಲಿ ಸರ್ವೆ ನಡೆಯುತ್ತಿದೆ ಎಂಬದು ಅರಿವಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಕಾಫಿ ಬೆಳೆಗಾರ ಮಾಚಿಮಾಡ ಸತೀಶ್ ಮಾತನಾಡಿ, ಹೈಟೆನ್ಷನ್ ವಿದ್ಯುತ್ ಯೋಜನೆ ಅನುಷ್ಠಾನಕ್ಕೆ 15 ವರ್ಷಗಳ ಹಿಂದೆ ಕೂಡ ಇದೇ ರೀತಿ ಸರ್ವೆ ನಡೆಸಲಾಗಿತ್ತು. ಇದನ್ನೂ ಕೂಡ ಹೀಗೆ ಸರ್ವೆ ನಡೆಸಿ ಅನುಷ್ಠಾನಕ್ಕೆ ಮುಂದಾಗುವದರಲ್ಲಿ ಅನುಮಾನವಿಲ್ಲ. ಖಾಸಗಿ ಜಾಗದಲ್ಲಿ ಸರ್ವೆಗೆ ಮುಂದಾದಲ್ಲಿ ಪ್ರತಿಭಟಿಸುವದಾಗಿ ಎಚ್ಚರಿಸಿದರು.

1 ಕಿ.ಮೀ. ರೈಲ್ವೆ ಟ್ರ್ಯಾಕ್ ನಿರ್ಮಾಣಕ್ಕೆ 6.5 ಎಕರೆ ಜಾಗದ ಅವಶ್ಯಕತೆ ಬರುತ್ತದೆ. ಸಣ್ಣ ಬೆಳೆಗಾರರ ಜಾಗವನ್ನು ಪರಿಹಾರದ ರೀತಿಯಲ್ಲಿ ಹಣ ನೀಡುವದರಿಂದ ಜನರು ನಿರ್ಗತಿಕರಾಗುತ್ತಾರೆ ಎಂದು ನೋವು ತೋಡಿಕೊಂಡರು. ಗೋಷ್ಠಿಯಲ್ಲಿ ಕಾನೂರು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಾಡ್ಯಮಾಡ ಭರತ್, ಬೆಳೆಗಾರ ಅಣ್ಣಳಮಾಡ ನವೀನ್ ಅಚ್ಚಯ್ಯ ಉಪಸ್ಥಿತರಿದ್ದರು.