ಕುಶಾಲನಗರ, ಜೂ. 12: ಮಾದಾಪಟ್ಟಣ ಬಳಿ ವ್ಯಕ್ತಿಯನ್ನು ಕೊಲೆಗೈದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸ್ಥಳೀಯ ಖಾಸಗಿ ರೆಸಾರ್ಟ್‍ನ ನೌಕರ ಹೆಚ್‍ಡಿ ಕೋಟೆ ಮೂಲದ ಚೆನ್ನಪ್ಪ (27) ಎಂಬಾತನನ್ನು ಮನೆಯಲ್ಲಿ ಕಲ್ಲು ಎತ್ತಿ ಹಾಕಿ ಕೊಲೆಗೈದ ಆತನ ಸಹಚರ ನಾಗರಾಜು (19) ಎಂಬಾತನ್ನು ಹೆಚ್‍ಡಿ ಕೋಟೆ ಬಳಿ ಬಂಧಿಸಿದ್ದಾರೆ. ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಕಲಹ ಏರ್ಪಟ್ಟು ಭಾನುವಾರ ರಾತ್ರಿ ಚೆನ್ನಪ್ಪನನ್ನು ಚಾಕುವಿನಿಂದ ಇರಿದು ತಲೆಗೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವದಾಗಿ ತನಿಖೆ ವೇಳೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕೊಲೆಯಾದ ಚನ್ನಪ್ಪ ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.