ಸಿದ್ದಾಪುರ, ಜೂ. 25: ಕಾಮಗಾರಿಯ ಕಮೀಷನ್ ವಿಚಾರದಲ್ಲಿ ಮಾತಿನ ಚಕಮಕಿ ನಡೆದು ಈರ್ವರು ಗ್ರಾ.ಪಂ ಸದಸ್ಯರ ನಡುವೆ ಬಸ್ಸ್‍ನಿಲ್ದಾಣದಲ್ಲಿ ಹೊಡೆದಾಟ ನಡೆದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.ಸಿದ್ದಾಪುರ ಗ್ರಾ.ಪಂ ಸದಸ್ಯ ಟಿ.ಹೆಚ್ ಮಂಜುನಾಥ್ ಎಂಬವರು ಸಿದ್ದಾಪುರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾಮಗಾರಿಯೊಂದನ್ನು ಗುತ್ತಿಗೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರದಲ್ಲಿ ಗ್ರಾ.ಪಂ ಸದಸ್ಯ ಅಬ್ದುಲ್ ಶುಕೂರ್ ಎಂಬವರು ಕಾಮಗಾರಿಗೆ ಸಂಬಂಧಿಸಿದಂತೆ ತನಗೆ ಕಮಿಷನ್‍ಬೇಕೆಂದು ಕೇಳುತ್ತಿದ್ದು, ಸೋಮವಾರ ಬೆಳಿಗ್ಗೆ ಸಿದ್ದಾಪುರ ಬಸ್ಸ್ ನಿಲ್ದಾಣಕ್ಕೆ ತೆರಳಿದ ಸಂದರ್ಭ ಕಮಿಷನ್‍ಬೇಕೆಂದು ತಿಳಿಸಿ, ತನ್ನ ಮೇಲೆ ಕೊಡೆಯಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದದಿಂದ ನಿಂದಿಸಿ, ಹಣ ನೀಡದಿದ್ದರೆ ಕೈಕಾಲು ಮುರಿದು, ಕೊಲೆ ಮಾಡುವದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಮಂಜುನಾಥ್ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಮಂಜುನಾಥ್ ನೀಡಿದ ಪುಕಾರಿನ ಮೇರೆಗೆ ಗ್ರಾ.ಪಂ ಸದಸ್ಯ ಅಬ್ದುಲ್ ಶುಕೂರ್ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿದ್ದು, ಸಿದ್ದಾಪುರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.