*ಗೋಣಿಕೊಪ್ಪಲು, ಜೂ. 25: ಬಾಳೆಲೆ ಚೆಸ್ಕಾಂ ಕಾರ್ಯಪಾಲನಾ ಶಾಖೆಯ ಸಹಾಯಕ ಇಂಜಿನಿಯರ್ ಸೋಮೇಶ್ ಅವರನ್ನು ಕರ್ತವ್ಯದಿಂದ ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಬಾಳೆಲೆ ಚೆಸ್ಕಾಂ ಶಾಖೆ ಕಚೇರಿಗೆ ಮುತ್ತಿಗೆ ಹಾಕಿ ಇಂಜಿನಿ ಯರ್ ವಿರುದ್ಧ ಪ್ರತಿಭಟಿಸಿದರು.

ಜಿ.ಪಂ. ಮಾಜಿ ಸದಸ್ಯ ಅರಮಣಮಾಡ ರಂಜನ್ ಅವರ ನೇತೃತ್ವದಲ್ಲಿ ಬಾಳೆಲೆ ಹೋಬಳಿಯ ದೇವನೂರು, ಸುಳುಗೋಡು, ಬೆಳ್ಳೂರು, ಮಲ್ಲೂರು, ನಿಟ್ಟೂರು, ಕೊಟ್ಟಗೇರಿ, ಕಾರ್ಮಾಡು ಮತ್ತು ದೇವನೂರು 2 ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಇಂಜಿನಿಯರ್ ಬಗ್ಗೆ ತನಿಖೆ ಯಾಗಬೇಕು. ಮೇಲಾಧಿಕಾರಿಗಳನ್ನು ನಿರ್ಲಕ್ಷಿಸಿ ಸ್ವ ಇಚ್ಚೆಯಿಂದ ಕಾರ್ಯನಿರ್ವಹಿಸುವ ಇಂಜಿನಿಯರ್ ಸೋಮೇಶ್ ಗ್ರಾಮಸ್ಥರಿಂದ ಹಣ ವಸೂಲಿ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಇಂಜಿನಿಯರ್ ನಮಗೆ ಬೇಡ. ಈತನನ್ನು ಅಮಾನತ್ತುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ರಂಜನ್, ಬಾಳೆಲೆ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ಸೋಮೇಶ್ ತಮ್ಮ ಅಧಿಕಾರಾ ವಧಿಯಲ್ಲಿ ಗ್ರಾಮದಲ್ಲಿ ನೂರಾರು ವಿದ್ಯುತ್ ಕಂಬಗಳನ್ನು ಮತ್ತು ಟ್ರಾನ್ಸ್‍ಫಾರ್ಮರ್‍ಗಳನ್ನು ಅಳವಡಿಸಿ ಗ್ರಾಮಸ್ಥರಿಂದಲೇ ಲಕ್ಷಾಂತರ ರೂಪಾಯಿ ಹಣ ಪಡೆದು ಕೊಂಡಿದ್ದಾರೆ. ಪ್ರತಿ ಕಂಬ ಅಳವಡಿಸಲು 10 ಸಾವಿರ ರೂಪಾಯಿಯಂತೆ ಹಣ ವಸೂಲಿ ಮಾಡುತ್ತಿದ್ದಾರೆ. ಗ್ರಾಮಸ್ಥರೇ ಆದ ಮಲಚೀರ ಸಂಜು ಅವರಿಂದ ಒಂದು ಲಕ್ಷ ಹಣ ಪಡೆದುಕೊಂಡ ಆರೋಪ ಇವರ ಮೇಲೆ ಇದ್ದು, ಚೆಕ್ ರೂಪದಲ್ಲೇ ಹಣ ಪಡೆದಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಂಡು ತನಿಖೆ ನಡೆಸಬೇಕು. ಗ್ರಾಮಸ್ಥರಿಂದ ಲಂಚದ ರೂಪದಲ್ಲಿ

(ಮೊದಲ ಪುಟದಿಂದ) ಪಡೆದ ಹಣದಿಂದ ತಿತಿಮತಿ ಸಮೀಪದ ಭದ್ರಗೊಳದಲ್ಲಿ ಒಂದು ಕೋಟಿಗೂ ಹೆಚ್ಚು ಬೆಲೆ ಬಾಳುವ ಮನೆಯನ್ನು ನಿರ್ಮಿಸಿ ಕೊಂಡು ಐಶಾರಾಮಿ ಜೀವನ ನಡೆಸುತ್ತಿ ದ್ದಾರೆ. ಈ ವೈಭೋಗಕ್ಕೆ ಗ್ರಾಮಸ್ಥರಿಂದ ಪಡೆದ ಲಂಚದ ಹಣವೇ ಕಾರಣ ಎಂದು ಆರೋಪಿಸಿದರು.

ಕೋಣನಕಟ್ಟೆ ಗ್ರಾಮಸ್ಥರಿಂದ ಹಣ ಪಡೆದು ಬಾಳೆಲೆಯ ಮೂಲಕ ಹಾದು ಹೋಗಬೇಕಾದ ಎಕ್ಸ್‍ಪ್ರೆಸ್ ವೇ ಕೇಬಲನ್ನು ಪೆÇನ್ನಪ್ಪಸಂತೆ ಜಂಕ್ಷನ್ ನಿಂದ ಕೋಣನಕಟ್ಟೆ ಮಾರ್ಗವಾಗಿ ಕೊಂಡೊಯ್ಯಲು ಕಾಮಗಾರಿ ನಡೆಸಿದ್ದಾರೆ. ಇದು ಮೇಲಾಧಿಕಾರಿ ಗಳಿಗೆ ಮಾಹಿತಿ ಇಲ್ಲದೆ ತಾನೇ ಸ್ವ ಇಚ್ಚೆಯಿಂದ ಮಾಡಿದ ಕಾರ್ಯ ವಾಗಿದೆ ಎಂದು ಹೇಳಿದರು.

ಯಾವದೇ ಅಂದಾಜು ಪಟ್ಟಿ ತಯಾರಿಸದೆ ಎಫ್ 2 ಫೀಡರ್ ನಿಂದ ಪೆÇನ್ನಂಪೇಟೆ ಕಿರುಗೂರು, ನಲ್ಲೂರು, ಪೆÇನ್ನಪ್ಪಸಂತೆ, ಕೈನಾಟಿ ಹಾಗೂ ಬಾಳೆಲೆ ಕೊಡವ ಸಮಾಜದವರೆಗೆ ಎಕ್ಸ್‍ಪ್ರೆಸ್ ವೇ ಕೇಬಲ್ ಅನ್ನು ಹಾಕಲು ಅಂದಾಜು ಪಟ್ಟಿ ತಯಾರಿ ಸಲಾಗಿತ್ತು. ಆದರೆ ಇಂಜಿನಿಯರ್ ಸೋಮೇಶ್ ಸ್ವಇಚ್ಚೆಯಿಂದ ಪೆÇನ್ನಪ್ಪಸಂತೆ ಜಂಕ್ಷನ್‍ನಿಂದ ಕೋಣನಕಟ್ಟೆ ಮಾರ್ಗವಾಗಿ 17.9 ಮೀಟರ್‍ನಷ್ಟು ದೂರಕ್ಕೆ ಪಿ.ಸಿ.ಸಿ. ಕಂಬಗಳನ್ನು ಹಾಕಿ ಎಕ್ಸ್‍ಪ್ರೆಸ್ ಕೇಬಲನ್ನು ಪೆÇನ್ನಪ್ಪಸಂತೆ ಜಂಕ್ಷನ್ ನಿಂದ ಕೋಣನಕಟ್ಟೆ ಮಾರ್ಗವಾಗಿ ಕೊಂಡೊಯ್ಯಲು ಕ್ರಮ ಕೈಗೊಂಡಿ ದ್ದಾರೆ. ಇದಕ್ಕೆ ಬಾಳೆಲೆ ಗ್ರಾಮಸ್ಥರ ತೀವ್ರ ವಿರೋಧವಿದೆ ಎಂದು ತಿಳಿಸಿದರು.

ಆರ್.ಎಂ.ಸಿ. ಮಾಜಿ ಅಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ, ಗ್ರಾಮದಲ್ಲಿ ಮೀಟರ್‍ಗಳನ್ನು ಅಳವಡಿಸಿದರೂ ಬಹಳಷ್ಟು ಮಂದಿಗೆ ಆರ್.ಆರ್. ನಂಬರನ್ನು ನೀಡಿಲ್ಲ. ಗ್ರಾಮಸ್ಥರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಹಣ ನೀಡಿದವರಿಗೆ ಮಾತ್ರ ಕೆಲಸ ಬೇಗನೆ ನಡೆಯುತ್ತದೆ. ಹಣ ನೀಡದೆ ಪ್ರಶ್ನೆ ಮಾಡಿದವರ ವಿರುದ್ಧ ಪಿತೂರಿ ನಡೆಸುವ ಇಂಜಿನಿಯರ್ ಇಲಾಖೆಯ ವಿಜೆಲೆನ್ಸಿಯವರಿಗೆ ದೂರು ನೀಡಿ ಇಲ್ಲದ ಆರೋಪ ಮಾಡುವ ಮೂಲಕ ಅವರಿಂದ ಹಣ ವಸೂಲಿ ಮಾಡುವ ದಂಧೆಗೆ ತೊಡಗಿಸಿಕೊಂಡಿದ್ದಾರೆ

ಇಂತಹ ಇಂಜಿನಿಯರ್ ವಿರುದ್ಧ ಕರ್ತವ್ಯ ಲೋಪ ಮತ್ತು ಭ್ರಷ್ಟಚಾರಿ ಎಂಬ ಆರೋಪದಡಿಯಲ್ಲಿ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರಿಂದ ವಸೂಲಿ ಮಾಡಿದ ಹಣವನ್ನು ಹಿಂದಿರುಗಿಸುವ ವ್ಯವಸ್ಥೆ ಕಲ್ಪಿಸಲು ಮೇಲಾಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿ ದರು. ಇಂಜಿನಿಯರ್ ಸೋಮೇಶ್ ಅವರೊಂದಿಗೆ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹದೇವಪ್ಪ ಎಂಬ ಲೈನ್ ಮೆನ್‍ನನ್ನು ವರ್ಗಾ ವಣೆ ಮಾಡುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಕೊಕ್ಕೆಂಗಡ ರಂಜನ್, ಚಕ್ಕೇರ ಸೂರ್ಯ, ಆರ್.ಎಂ.ಸಿ. ಸದಸ್ಯ ಸುಜಾ ಪೂಣಚ್ಚ, ಗ್ರಾಮಸ್ಥರಾದ ಚಿಮ್ಮಣಿಮಾಡ ಕೃಷ್ಣ, ಜ್ಯೋತಿ ಸೇರಿದಂತೆ ನೂರಾರು ಗ್ರಾಮಸ್ಥರು ಹಾಜರಿದ್ದರು.