ಮಡಿಕೇರಿ, ಜೂ.26: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮತ ಯಂತ್ರಗಳು ‘ಹ್ಯಾಕ್’ ಆಗಿರುವ ಬಗ್ಗೆ ಸಂಶಯವಿದೆ ಎಂದು ಗಂಭೀರ ಆರೋಪ ಮಾಡಿರುವ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ಅರುಣ್ ಮಾಚಯ್ಯ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳನ್ನು ವಿವಿಪ್ಯಾಟ್ ಸಹಿತ ಮರು ಎಣಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಈ ಸಂಬಂಧವಾಗಿ ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳ ಮೂಲಕ ಅವರು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯುಕ್ತರುಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಕ್ಷೇತ್ರದ ಮರು ಮತ ಎಣಿಕೆಗೆ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.ಇದಕ್ಕೂ ಮೊದಲು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ (ಮೊದಲ ಪುಟದಿಂದ) ಮತದಾರರು ನೀಡಿರುವ ಆದೇಶಕ್ಕೆ ತಲೆಬಾಗುವದಾಗಿ ತಿಳಿಸಿದರು, ಆದರೆ ಎಲೆಕ್ಟ್ರಾನಿಕ್ ಮತ ಯಂತ್ರದ ಮೂಲಕ ನಡೆಯುವ ಚುನಾವಣೆ ಪಾರದರ್ಶಕವಾಗಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಅಲ್ಲದೆ ಇದನ್ನು ತಾಂತ್ರಿಕ ಪರಿಣಿತರ ಮೂಲಕ ತಾವು ಸಾಬೀತು ಮಾಡಲು ಸಿದ್ಧರಿರುವದಾಗಿಯೂ ಅರುಣ್ ಮಾಚಯ್ಯ ಸ್ಪಷ್ಟಪಡಿಸಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 269 ಮತಗಟ್ಟೆಗಳಿದ್ದು, ಚುನಾವಣೆ ಬಳಿಕ ತಾನು ಹಾಗೂ ಪಕ್ಷದ ಕಾರ್ಯಕರ್ತರು ನಡೆಸಿದ ಸಮೀಕ್ಷೆಯ ಪ್ರಕಾರ ತಾನು ಸುಮಾರು 9000 ಮತಗಳ ಅಂತರದಿಂದ ಗೆಲುವು ಸಾಧಿಸಬೇಕಿತ್ತು. ಆದರೆ ಚುನಾವಣಾ ಮತ ಎಣಿಕೆಯ ಸಂದರ್ಭ ಪ್ರತಿಸ್ಪರ್ಧಿ ಅಭ್ಯರ್ಥಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿರುವದನ್ನು ಗಮನಿಸಿದರೆ ಮತಯಂತ್ರಗಳು ಹ್ಯಾಕ್ ಆಗಿರುವ ಬಗ್ಗೆ ಸಂಶಯ ಮೂಡಿದೆ. ಚುನಾವಣೆಗೆ ಸಂಬಂಧಿಸಿದಂತೆ ಯಾವದೇ ತಕರಾರುಗಳಿದ್ದರೂ 45 ದಿನಗಳ ಒಳಗಾಗಿ ಸಲ್ಲಿಸಬೇಕೆಂಬ ನಿಯಮವಿದ್ದು, ಒಂದು ತಿಂಗಳ ಕಾಲ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ ಚುನಾವಣಾಧಿಕಾರಿಗಳಿಗೆ ಹಾಗೂ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿರುವದಾಗಿ ತಿಳಿಸಿದರು.

ಎಲೆಕ್ಟ್ರಾನಿಕ್ ಮತ ಯಂತ್ರಗಳು ಪಾರದರ್ಶಕವಲ್ಲ ಎಂಬದನ್ನು ಅಮೆರಿಕಾ, ಇಟಲಿ, ನೆದರ್‍ಲ್ಯಾಂಡ್, ಜರ್ಮನಿ ಮುಂತಾದ ತಾಂತ್ರಿಕವಾಗಿ ಮುಂದುವರಿದ ದೇಶಗಳೇ ಸಾಬೀತು ಪಡಿಸಿವೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದ್ದರೂ, ಈ ಹಿಂದಿನ ಚುನಾವಣೆಗಳಲ್ಲಿ ಬಳಕೆ ಮಾಡಲಾದ ಇವಿಎಂ2 ಮತ ಯಂತ್ರಗಳು ಕೂಡ ವಿಶ್ವಾಸಾರ್ಹವಲ್ಲ ಎಂಬದನ್ನು ಕೇಂದ್ರ ಸರಕಾರವೇ ಒಪ್ಪಿಕೊಂಡಿತ್ತು. ಅಲ್ಲದೆ ಮುಂದಿನ ಚುನಾವಣೆಗಳಲ್ಲಿ ಇವಿಎಂ3 ಮತಯಂತ್ರಗಳನ್ನು ಬಳಸುವದಾಗಿ ಕೇಂದ್ರ ಸರಕಾರ ಸುಪ್ರೀಂಕೋರ್ಟ್‍ಗೆ ಭರವಸೆ ನೀಡಿತ್ತು. ಆದರೂ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇವಿಎಂ2 ಯಂತ್ರಗಳನ್ನು ಬಳಸಲಾಗಿದ್ದು, ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಅರುಣ್ ಮಾಚಯ್ಯ ಆರೋಪಿಸಿದರು.

ಕರ್ನಾಟಕ ರಾಜ್ಯದಲ್ಲೇ ಸುಮಾರು 12.50 ಲಕ್ಷಕ್ಕಿಂತಲೂ ಅಧಿಕ ಇವಿಎಂ2 ಮತಯಂತ್ರಗಳು ದಾಸ್ತಾನು ಇದ್ದರೂ, ಈ ಬಾರಿಯ ಚುನಾವಣೆಗೆ ಉತ್ತರ ಪ್ರದೇಶ ಹಾಗೂ ಗುಜರಾತ್ ರಾಜ್ಯಗಳಲ್ಲಿ ಬಳಸಲಾದ ಮತಯಂತ್ರಗಳನ್ನು ತರಿಸಲಾಗಿದೆ. ಮತಯಂತ್ರಗಳನ್ನು ಮೈಸೂರಿನ ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ದಾಸ್ತಾನು ಮಾಡಿರುವದು ಮತ್ತಷ್ಟು ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ. ಪ್ರೊಫೆಸರ್ ಒಬ್ಬರು ಇತರ ಇಂಜಿನಿಯರ್‍ಗಳ ತಂಡದ ಮೂಲಕ ಮತಯಂತ್ರಗಳನ್ನು ‘ಮ್ಯಾನುಪ್ಯುಲೇಟ್’ ಮಾಡಿರುವ ಬಗ್ಗೆ ಸಂಶಯವಿದೆ ಎಂದು ಆರೋಪಿಸಿದರು.

ಮೈಸೂರಿನ ಒಂದು ಕ್ಷೇತ್ರದಲ್ಲಿ ಚುನಾವಣೆ ಸಂದರ್ಭ ನಡೆದ ಹ್ಯಾಕ್ ಆಮಿಷದ ಘಟನೆಯೊಂದನ್ನು ಉದಾಹರಣೆ ನೀಡಿದ ಅವರು ಈ ರೀತಿಯ ವ್ಯಕ್ತಿಗಳು ಕೊಡಗಿನ ಮತಯಂತ್ರಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆಯಿದ್ದು, ಅವರಲ್ಲಿ ಕೆಲವು ವ್ಯಕ್ತಿಗಳು ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಇದೆ ಎಂದು ಆರೋಪಿಸಿದ ಅವರು, ಈ ಸಂಬಂಧ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಇವಿಎಂ2 ಮತ ಯಂತ್ರಗಳಿಗೆ ಮೈಕ್ರೋಚಿಪ್ ಅಳವಡಿಸಿ, ಅದರಲ್ಲಿ ದಾಖಲಾಗುವ ಮತಗಳನ್ನು ಕುಳಿತ ಸ್ಥಳದಿಂದಲೇ ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಿದೆ ಎಂಬದನ್ನು ತಾಂತ್ರಿಕ ಪರಿಣಿತರೇ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತದಾನದ ಎಲ್ಲಾ ಮತಯಂತ್ರಗಳಲ್ಲಿ ದಾಖಲಾಗಿರುವ ಮತಗಳನ್ನು ವಿವಿಪ್ಯಾಟ್‍ನಲ್ಲಿ ಸಂಗ್ರಹವಾಗಿರುವ ಮತಗಳೊಂದಿಗೆ ತಾಳೆ ಮಾಡುವ ನಿಟ್ಟಿನಲ್ಲಿ ಮರು ಮತ ಎಣಿಕೆಗೆ ಆದೇಶ ಮಾಡಬೇಕು ಎಂದು ಅರುಣ್ ಮಾಚಯ್ಯ ಒತ್ತಾಯಿಸಿದರು.

ಈ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯದಲ್ಲೂ ದೂರು ದಾಖಲಿಸಿ ಮತ ಯಂತ್ರಗಳನ್ನು ದುರುಪಯೋಗಪಡಿಸಿಕೊಂಡಿರಬಹುದಾದ ಪ್ರಕರಣದ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸುವದಾಗಿ ಹೇಳಿದರು.

ಇದೇ ರೀತಿಯ ದೂರುಗಳನ್ನು ಮಂಗಳೂರು, ಮೈಸೂರು ಮತ್ತಿತರ ಪ್ರದೇಶಗಳ ಅಭ್ಯರ್ಥಿಗಳೂ ಸಲ್ಲಿಸಲಿದ್ದಾರೆ. ಮರು ಮತ ಎಣಿಕೆಯಲ್ಲಿ ತಾನು ಗೆಲುವು ಸಾಧಿಸಬೇಕು ಎಂಬದಕ್ಕಿಂತಲೂ ಹೆಚ್ಚಾಗಿ ಮತದಾನ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂಬದೇ ತಮ್ಮ ಆಶಯವಾಗಿದೆ ಎಂದು ಅರುಣ್ ಮಾಚಯ್ಯ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಆರ್.ಕೆ. ಸಲಾಂ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಬಿ.ಎಸ್. ರಮಾನಾಥ್ ಹಾಗೂ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಧರ್ಮಜ ಉತ್ತಪ್ಪ ಹಾಜರಿದ್ದರು.