ಕುಶಾಲನಗರ, ಜೂ. 26: ಕುಶಾಲನಗರದ ಬೈಪಾಸ್ ರಸ್ತೆಯ ಮಧ್ಯೆ ರಸ್ತೆ ಬಾಯಿ ತೆರೆದು ನಿಂತಿರುವ ದೃಶ್ಯ ಕಂಡುಬಂದಿದೆ. ಒಳಚರಂಡಿ ಕಾಮಗಾರಿ ಕುಸಿದು ನಿಂತಿದ್ದು, ಈ ಮೂಲಕ ವಾಹನ ಸವಾರರಿಗೆ ತೆರಳಲು ಅನಾನುಕೂಲ ಉಂಟಾಗಿದೆ.

ಸ್ಥಳೀಯ ನಾಗರಿಕರು ರಸ್ತೆ ಮಧ್ಯೆ ಕಲ್ಲನ್ನಿಟ್ಟು ಅಪಾಯವಾಗದಂತೆ ಎಚ್ಚರವಹಿಸಿದ್ದಾರೆ. ಪಟ್ಟಣದಲ್ಲಿ ನಿರ್ಮಿಸಿರುವ ಒಳಚರಂಡಿ ಕಾಮಗಾರಿ ಬಹುತೇಕ ಕಳಪೆಯಾಗಿದ್ದು, ಹಲವು ರಸ್ತೆಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಸೃಷ್ಠಿಯಾಗಿದೆ. ಇತ್ತೀಚೆಗಷ್ಟೆ ರಥಬೀದಿಯಲ್ಲಿ ಇದೇ ರೀತಿ ಒಳಚರಂಡಿ ಕಾಮಗಾರಿ ಕುಸಿದ ಘಟನೆ ನಡೆದಿತ್ತು.

ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಉಂಟಾಗಲಿರುವ ಅಪಾಯವನ್ನು ತಪ್ಪಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.