ಮಡಿಕೇರಿ, ಜೂ. 27: ಇಂದು ಬೆಳಗ್ಗಿನ ಜಾವ 5.30ರ ಸುಮಾರಿಗೆ ಬೆಂಗಳೂರಿನಿಂದ ಮಡಿಕೇರಿಗೆ ಬರುತ್ತಿದ್ದ ರಾಜ್ಯ ಸಾರಿಗೆ ಬಸ್‍ಗೆ (ಕೆ.ಎ.21-ಎಫ್ 0026)ಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಲಾರಿಯೊಂದು (ಎಂಹೆಚ್ 06-ಎ.ಸಿ.-3990) ಡಿಕ್ಕಿಯಾದ ಘಟನೆ ಬೋಯಿಕೇರಿ ಹೆದ್ದಾರಿಯಲ್ಲಿ ಸಂಭವಿಸಿದೆ.

ಪರಿಣಾಮ ನಿಯಂತ್ರಣ ಕಳೆದುಕೊಂಡಿರುವ ಲಾರಿಯಲ್ಲಿದ್ದ ಕಬ್ಬಿಣದ ಸರಕು ರಸ್ತೆಯಲ್ಲಿ ಬೀಳುವದರೊಂದಿಗೆ ಲಾರಿಯೂ ಮಗುಚಿದೆ. ಈ ವೇಳೆ ಬಸ್‍ನಲ್ಲಿದ್ದ ನಾಲ್ಕೈದು ಮಂದಿ ಸಣ್ಣಪುಟ್ಟ ಗಾಯಗೊಂಡು ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಬಸ್ ಚಾಲಕ ಅಶೋಕ ಎಂಬವರ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಗುರುಮಿಂದರ್ ಸಿಂಗ್ ಪ್ರಕಾರ ಸರಕು ಮಂಗಳೂರಿನಿಂದ ಆಂಧ್ರಪ್ರದೇಶದ ಹಿಂದುಪುರಕ್ಕೆ ಸಾಗಿಸಲಾಗುತ್ತಿತ್ತು.