ಪೊನ್ನಂಪೇಟೆ, ಜೂ. 27: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಕಾಡಾನೆ ಧಾಳಿ ಮಾಡಿದ್ದು, ಬೈಕ್ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಪೊನ್ನಪ್ಪಸಂತೆಯ ಬೆಳೂರು ಗ್ರಾಮ ನಿವಾಸಿ ಮಜೀದ್ ಎಂಬವರು ಗೋಣಿಕೊಪ್ಪದಲ್ಲಿ ಗಿರಣಿ ಅಂಗಡಿ ಇಟ್ಟುಕೊಂಡಿದ್ದು, ಇಂದು ಸಂಜೆ 4.30 ಗಂಟೆಗೆ ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು. ಚೆನ್ನಂಗೊಲ್ಲಿ-ಬಾಳೆಲೆ ರಸ್ತೆಯ ಬೆಮ್ಮತ್ತಿ ಎಂಬಲ್ಲಿ ತಲಪುವಷ್ಟರಲ್ಲಿ ದಿಢೀರನೇ ಒಂಟಿ ಸಲಗ ಎದುರಾಗಿದೆ. ಮಜೀದ್ ಅವರ ಮೇಲೆ ಧಾಳಿಗೆ ಮುಂದಾದಾಗ ಮಜೀದ್ ಬೈಕ್‍ನ್ನು ಹಿಂದಕ್ಕೆ ಚಾಲಿಸಿದ್ದಾರೆ. ಆದರೆ ಆನೆ ಸುಮಾರು 50 ಮೀಟರ್‍ನಷ್ಟು ದೂರ ಬೆನ್ನಟ್ಟಿದ್ದು, ವಿಧಿಯಿಲ್ಲದೆ ಮಜೀದ್ ಬೈಕ್ ಅನ್ನು ರಸ್ತೆಯಲ್ಲಿಯೇ ಬಿಟ್ಟು ಓಡಿ ಬಚಾವಾಗಿದ್ದಾರೆ. ಆನೆ ತನ್ನ ಆಕ್ರೋಶವನ್ನು ಬೈಕ್ ಮೇಲೆ ತೋರಿಸಿದೆ. ಬೈಕನ್ನು ತುಳಿದು ಜಖಂ ಮಾಡಿ ತೋಟದೊಳಗೆ ಮರೆಯಾಗಿದೆ. ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಮಜೀದ್‍ಗೆ ಚಿಕಿತ್ಸೆ ನೀಡಲಾಗಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.