ಮಡಿಕೇರಿ, ಜೂ. 28: ಪಿರಿಯಾಪಟ್ಟಣ ತಾಲೂಕಿನ ಚಿಕ್ಕ ಕುಂಬಾರಹಳ್ಳಿ ನಿವಾಸಿ ಸಿ.ಬಿ ಕುಮಾರ್ ಅವರು ಕಿರಣ, ರಾಜರಾಜೇಶ್ವರಿ ಹೀರೋ ಮೋಟರ್ಸ್, ಇವರಿಂದ ತಮ್ಮ ಹಳೇ ಬೈಕ್ 21 ಸಾವಿರ ರೂ ನೀಡಿ, ಹೊಸದೊಂದು ಬೈಕು ಖರೀದಿಸಿದ್ದರು. ಇವರು ಪೂರ್ತಿ ಹಣವನ್ನು ಕಂತುಗಳಲ್ಲಿ ಪಾವತಿಸಿದರೂ ಸಹ ಇನ್ನೂ ಅಸಲು ರೂ. 38,080 ಗಳು ಮತ್ತು ಬಡ್ಡಿ ರೂ. 31,320 ಗಳು ಬಾಕಿ ಇದೆ ಎಂದು ಹೇಳಿ ಹಣ ಪಾವತಿಸಲು ಒತ್ತಾಯಿಸಿರುತ್ತಾರೆ. ಆದ್ದರಿಂದ ಇವರು ಕೊಡಗಿನ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರನ್ನು ಕಿರಣ, ರಾಜರಾಜೇಶ್ವರಿ ಹೀರೋ ಮೋಟರ್ಸ್, ಇವರ ವಿರುದ್ಧ ನೀಡಿದ್ದರು.

ಈ ಹಿನ್ನೆಲೆ ದೂರನ್ನು ನ್ಯಾಯಾಲಯದ ಸಿ.ವಿ. ಮರಗೂರ, ಅಧ್ಯಕ್ಷರು ಮತ್ತು ಎಂ.ಸಿ ದೇವಕುಮಾರ್, ಸದಸ್ಯರು, ಇವರು ಎರಡು ಪಕ್ಷದವರು ಹಾಜರುಪಡಿಸಿದ ದಾಖಲೆಗಳ ಆಧಾರದ ಮೇಲೆ ದೂರುದಾರರಿಗೆ ರೂ.65,806, ಮಾನಸಿಕ ತೊಂದರೆಗೆ ರೂ.3 ಸಾವಿರಗಳ ಸಹಿತ ಶೇ.12 ರಂತೆ ಬಡ್ಡಿಯನ್ನು ಕಿರಣ, ರಾಜರಾಜೇಶ್ವರಿ ಹೀರೋ ಮೋಟಾರ್ಸ್, ಇವರು ಭರಿಸಬೇಕೆಂದು ಜಿಲ್ಲಾ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.

ಇನ್ನೊಂದು ಪ್ರಕರಣ: ಸಿ.ವಿ. ಪಲಕಶನ್ ತಂದೆ ಸಿ.ಎಸ್. ವೀರಪ್ಪ, ಮಡಿಕೇರಿ ಇವರು ಜೆ.ಆರ್. ಇನ್ಫೊಟೆಕ್ ಬೆಂಗಳೂರು ಇವರಿಂದ 2016ರ ಮಾರ್ಚ್ 30 ರಂದು ಕ್ಯಾನನ್ ಪ್ರಿಂಟರ್‍ನ್ನು ರೂ. 2584 ಗಳಿಗೆ ಖರೀದಿಸಿದ್ದರು. ಆದರೆ ಒಂದು ವರ್ಷದ ವಾರೆಂಟಿ ಅವಧಿಯ ಒಳಗೆ ಈ ಪ್ರಿಂಟರ್ ಕೆಟ್ಟು ಹೋಗಿದೆ. ಆದ್ದರಿಂದ ಸಿ.ವಿ. ಪಲಶಲನ್ ಅವರು ಈ ಪ್ರಿಂಟರ್‍ನ್ನು ಸರಬರಾಜು ಮಾಡಿದ ಅಂಗಡಿ ವಿರುದ್ಧ ಕೊಡಗಿನ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ದಾಖಲಿಸಿದ್ದರು.

ನ್ಯಾಯಾಲಯದ ಸಿ.ವಿ. ಮರಗೂರ ಅಧ್ಯಕ್ಷರು ಮತ್ತು ಎಂ.ಸಿ. ದೇವಕುಮಾರ್, ಸದಸ್ಯರು ಇವರು ಈ ದೂರಿನ ದಾಖಲೆಗಳನ್ನು ಪರಿಶೀಲಿಸಿ, ಎದುರುದಾರರು ವೇದಿಕೆಯ ಮುಂದೆ ಹಾಜರಾಗಿಲ್ಲದ ಕಾರಣ ಏಕಪಕ್ಷೀಯವಾಗಿ ಆದೇಶಿಸಿದೆ. ಆದೇಶದಲ್ಲಿ ಎದುರುದಾರರು ರೂ. 2580ರ ಪ್ರಿಂಟರ್ ವೆಚ್ಚ, ರೂ. 1500 ಗಳ ಪರಿಹಾರ ಮತ್ತು ರೂ. 2 ಸಾವಿರಗಳ ಖರ್ಚು ವೆಚ್ಚಗಳನ್ನು ಪಾವತಿಸಲು ಆದೇಶಿಸಿದೆ. ಈ ಅದೇಶ ಪಾಲಿಸಲು ಎದುರುದಾರರಿಗೆ 60 ದಿನಗಳ ಅವಧಿಯನ್ನು ನೀಡಿದೆ.