ಕುಶಾಲನಗರ, ಜೂ 29: ಕುಶಾಲನಗರ ರೋಟರಿ 2018-19 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಸ್ಥಳೀಯ ರೈತ ಸಹಕಾರ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು 3181 ರೋಟರಿಯ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ, ನೈರ್ಮಲ್ಯ ಸೇರಿದಂತೆ ಪರಿಸರ ಪೂರಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ರೋಟರಿ ಸದಾ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.

ನಿರ್ಗಮಿತ ಅಧ್ಯಕ್ಷ ಎನ್.ಜಿ.ಪ್ರಕಾಶ್ ನೇತೃತ್ವದಲ್ಲಿ ರೋಟರಿ ಸಂಸ್ಥೆ ವತಿಯಿಂದ ಕೈಗೊಂಡಿದ್ದ ಕಾರ್ಯಕ್ರಮಗಳ ಕುರಿತು ಜೋಸೆಫ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಾಯಕ ಗವರ್ನರ್ ಧರ್ಮಪುರ ನಾರಾಯಣ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳ ಮಕ್ಕಳ ಅಭಿವೃದ್ಧಿಗಾಗಿ ಆಶಾ ಸ್ಪೂರ್ತಿ ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದರು.

ಅಧ್ಯಕ್ಷ ಕೆ.ಎಂ. ಜೇಕಬ್ ಅವರಿಗೆ ನಿರ್ಗಮಿತ ಅಧ್ಯಕ್ಷ ಎನ್.ಜಿ ಪ್ರಕಾಶ್ ಅಧಿಕಾರ ಹಸ್ತಾಂತರಿಸಿದರು. ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ನೂತನ ಅಧ್ಯಕ್ಷರಿಗೆ ಬ್ಯಾಡ್ಜ್ ಧರಿಸುವ ಮೂಲಕ ಶುಭಹಾರೈಸಿದರು.

ರೋಟರಿ ಕಾರ್ಯದರ್ಶಿಯಾಗಿ ಬಿ.ಪ್ರೇಮ್ ಚಂದ್ರನ್ ಉಪಾಧ್ಯಕ್ಷರಾಗಿ ಎಂ.ಡಿ. ಅಶೋಕ್, ಖಜಾಂಚಿಯಾಗಿ ರವೀಂದ್ರ ರೈ, ಸಹ ಕಾರ್ಯದರ್ಶಿ ಯಾಗಿ ಶಿಬು ಥಾಮಸ್ ಆಯ್ಕೆಯಾದರು.

ನೂತನ ಸದಸ್ಯರಾಗಿ ಸೈಜನ್ ಪೀಟರ್, ಉಮಾಶಂಕರ್ ಪ್ರಮಾಣ ವಚನ ಸ್ವೀಕರಿಸಿದರು.

ನಿರ್ಗಮಿತ ಸಹಾಯಕ ಗವರ್ನರ್ ಮಹೇಶ್ ನಲ್ವಡೆ, ನಿರ್ಗಮಿತ ಕಾರ್ಯದರ್ಶಿ ಸಿ.ಬಿ.ಹರೀಶ್, ಪ್ರಮುಖರಾದ ಪಿ.ಎಸ್. ಮೋಹನ್ ರಾಮ್, ವಲಯ ಕಾರ್ಯದರ್ಶಿ ಕ್ರ್ರಿಜ್ವಲ್ ಕೊಟ್ಸ್, ಪಿ.ಆರ್.ನವೀನ್ ಉಪಸ್ಥಿತರಿದ್ದರು.