ಸೋಮವಾರಪೇಟೆ, ಜೂ.29: ತಾಲೂಕಿನ ಹರಗ, ಕುಂದಳ್ಳಿ ಸೇರಿದಂತೆ ಸಿದ್ದಲಿಂಗಪುರ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕೃಷಿ ಫಸಲು ನಷ್ಟಗೊಳಿಸುತ್ತಿವೆ.

ಕಳೆದ ರಾತ್ರಿ ಹರಗ ಗ್ರಾಮದ ಧರ್ಮಪ್ಪ, ಗಿರೀಶ್, ಡಾಲಿಪ್ರಕಾಶ್, ದೀಪಕ್ ಸೇರಿದಂತೆ ಇತರರ ಕಾಫಿ, ಬಾಳೆ ತೋಟಕ್ಕೆ ಧಾಳಿ ನಡೆಸಿರುವ 6 ಆನೆಗಳ ಗುಂಪು ಕೃಷಿ ಫಸಲು ನಷ್ಟಗೊಳಿಸಿವೆ.

ಶಾಂತಳ್ಳಿ ಹೋಬಳಿಯ ಹರಗ, ಕುಂದಳ್ಳಿ ಭಾಗದಲ್ಲಿ ನಿರಂತರ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಸಿಬ್ಬಂದಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ.

ಇದರೊಂದಿಗೆ ನಿಡ್ತ ಮೀಸಲು ಅರಣ್ಯದ ಬಾಣಾವರ, ಸಿದ್ದಲಿಂಗಪುರ ವ್ಯಾಪ್ತಿಯಲ್ಲೂ ಕಾಡಾನೆಗಳ ಹಾವಳಿ ಮಿತಿಮೀರುತ್ತಿದೆ. ಮರಿಯಾನೆಯೊಂದಿಗೆ ನಾಲ್ಕು ಕಾಡಾನೆಗಳಿರುವ ಹಿಂಡು ಈ ಭಾಗದ ಕೃಷಿ ಪ್ರದೇಶಗಳಿಗೆ ಲಗ್ಗೆಯಿಡುತ್ತಿದ್ದು, ಕೃಷಿ ಫಸಲು ನಷ್ಟಪಡಿಸುತ್ತಿವೆ. ಸಿದ್ದಲಿಂಗಪುರದ ಶಾರದ ಪುರಂದರ, ಬಾಬು, ಜ್ಯೋತಿ ಎಂಬವರುಗಳಿಗೆ ಸೇರಿದ ತೋಟಕ್ಕೆ ನುಗ್ಗಿ ಬಾಳೆ, ಕ್ಯಾನೆ ಗೆಣಸು ಫಸಲನ್ನು ತಿಂದು ನಾಶಗೊಳಿಸಿವೆ.