ಮಡಿಕೇರಿ, ಜೂ.29 : ಪುತ್ರ ಟಿಪ್ಪು ಜನಿಸಿದ ಸುವಾರ್ತೆ ದೊರೆತ ಹಿನ್ನೆಲೆಯಲ್ಲಿ ಕಾವೇರಿ ನದಿತಟದಲ್ಲಿರುವ ದಂಡಿನಪೇಟೆಯಲ್ಲಿ ತನ್ನ ಸೇನಾ ತುಕಡಿಯೊಂದಿಗೆ ಬೀಡು ಬಿಟ್ಟಿದ್ದ ಹೈದರಾಲಿ ಸಂಭ್ರಮದಿಂದ ಆ ಪ್ರದೇಶವನ್ನು ಕುಶಾಲನಗರವೆಂದು ನಾಮಕರಣ ಮಾಡಿದ್ದು, “ಕುಷ್” ಎಂದರೆ ಪರ್ಷಿಯನ್ ಭಾಷೆಯಲ್ಲಿ ಸಂಭ್ರಮ ಎಂದರ್ಥ ಎಂದು ಅಭಿಪ್ರಾಯಪಟ್ಟಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಕುಶಾಲನಗರ ಪಟ್ಟಣದ ಹೆಸರನ್ನು ಬದಲಾಯಿಸು ವಂತೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇವಟ್‍ಪರಂಬುವಿನ ನರಮೇಧಕ್ಕೆ ಕಾರಣನಾದ ಟಿಪ್ಪು ಸುಲ್ತಾನನ್ನು ನೆನಪಿಸುವ, ‘ಕುಶಾಲನಗರ’ ಪಟ್ಟಣದ ಹೆಸರನ್ನು ತೆಗೆದುಹಾಕಿ ಫ್ರೇಜರ್ ಪೇಟೆ ಅಥವಾ ಸಮರವೀರ ಕುಲ್ಲೇಟಿರ ಪೊನ್ನಣ್ಣನವರ ಹೆಸರನ್ನು ಮರುನಾಮಕರಣ ಮಾಡಬೇಕೆಂದು ಆಗ್ರಹಿಸಿದರು.

ಕೊಡಗಿನ ರಾಜರ ಆಳ್ವಿಕೆಗೆ ಕೊನೆಹಾಡಿ, ಕೊಡವ ಬುಡಕಟ್ಟು ಕುಲದ ಆತ್ಮಗೌರವವನ್ನು ಕಾಪಾಡಿದ ಹಾಗೂ 1835 ರಲ್ಲಿ ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಕೊಡಗಿನಲ್ಲಿ ಕೊಡವರ ಧಾರ್ಮಿಕ ಭಾವನೆಗಳಿಗೆ ಪೂರಕವಾದ ಗೋವುಗಳ ವಧೆಯನ್ನು ನಿಷೇಧಿಸುವ ಕಾಯ್ದೆಯನ್ನು ಜಾರಿ ಮಾಡಿದ ಜೆ.ಎಸ್.ಫ್ರೇಜರ್ ಅವರ ಹೆಸರನ್ನು ಈ ಪ್ರದೇಶಕ್ಕೆ ಇಡಲಾಗಿತ್ತು. ಆದರೆ, 1956 ರಲ್ಲಿ ವಿಶಾಲ ಮೈಸೂರು ಕರ್ನಾಟಕದೊಂದಿಗೆ ವಿಲೀನಗೊಂಡ ಬಳಿಕ ಫ್ರೇಜರ್‍ಪೇಟೆ ಹೆಸರನ್ನು ಕುಶಾಲನಗರವೆಂದು ಬದಲಾಯಿಸ ಲಾಯಿತ್ತೆಂದು ಬೇಸರ ವ್ಯಕ್ತಪಡಿಸಿದರು.

ಟಿಪ್ಪುವನ್ನು ನೆನಪಿಸುವ ಕುಶಾಲನಗರ ಹೆಸರಿಗೆ ಬದಲಾಗಿ ಬ್ರಿಟಿಷ್ ಅಧಿಕಾರಿ ಫ್ರೇಜರ್ ಹೆಸರನ್ನು ಇಡುವದು ಒಪ್ಪಿತವಾಗದಿದ್ದಲ್ಲಿ, ಕೊಡಗಿನ ಮೇಲೆ ನಿರಂತರ ಧಾಳಿ ನಡೆಸಿದ್ದ ಹೈದರ್ ಮತ್ತು ಟಿಪ್ಪುವನ್ನು ತಮ್ಮ ಸೈನ್ಯದ ಮೂಲಕ ಹಿಮ್ಮೆಟ್ಟಿಸಿದ್ದ, ಅಂದಿನ ಕೊಡಗು ರಾಜ್ಯದ ದಂಡನಾಯಕ ಕುಲ್ಲೇಟಿರ ಪೊನ್ನಣ್ಣ ಅವರ ಹೆಸರನ್ನು ಮರು ನಾಮಕರಣ ಮಾಡುವಂತೆ ನಾಚಪ್ಪ ಒತ್ತಾಯಿಸಿದರು.

ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿನ ಔರಂಗಜೇಬ್ ರಸ್ತೆಯನ್ನು ಮಾರ್ಪಡಿಸಿ ಡಾ. ಅಬ್ದುಲ್ ಕಲಾಂ ರಸ್ತೆಯೆಂದು ಹಾಗೂ ಅಕ್ಬರ್ ರಸ್ತೆಯನ್ನು ಬದಲಿಸಿ ಮಹಾರಾಣಾ ಪ್ರತಾಪ ರಸ್ತೆಯೆಂದು ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಸರ್ಕಾರ ಮಾರ್ಪಡಿಸಿರುವದು ಸ್ವಾಗತಾರ್ಹ. ಅದೇ ರೀತಿ ಕೊಡಗಿನಲ್ಲಿ ಟಿಪ್ಪುವಿನ ದುಷ್ಕøತ್ಯಗಳನ್ನು ನೆನಪಿಸುವ ಕುಶಾಲನಗರ ಹೆಸರನ್ನು ತೆಗೆದು ಮರುನಾಮಕರಣ ಮಾಡುವದು ಸೂಕ್ತವೆಂದು ತಿಳಿಸಿದರು.

ತಮ್ಮ ಬೇಡಿಕೆಯ ಮನವಿ ಪತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಹಲವು ಪ್ರಮುಖರಿಗೆ ಕಳುಹಿಸಿಕೊಟ್ಟಿರುವದಾಗಿ ನಾಚಪ್ಪ ತಿಳಿಸಿದರು. ಕುಶಾಲನಗರ ಪಟ್ಟಣದ ಹೆಸರು ಬದಲಾವಣೆ ಆಗದೇ ಇದ್ದಲ್ಲಿ ಶಾಂತಿಯುತ ಹೋರಾಟ ಮುಂದುವರೆಸುವದಾಗಿ ಎಚ್ಚರಿಕೆ ನೀಡಿದರು,

ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸುವ ಸಂದರ್ಭ ಕಲಿಯಂಡ ಪ್ರಕಾಶ್, ಮೂಕೊಂಡ ದಿಲೀಪ್, ಮಂದಪಂಡ ಮನೋಜ್, ಕಿರಿಯಮಾಡ ಶರೀನ್, ಚಂಬಾಂಡ ಜನತ್ ಹಾಗೂ ಅರೆಯಡ ಗಿರೀಶ್ ಉಪಸ್ಥಿತರಿದ್ದರು.