ಮಡಿಕೇರಿ, ಜೂ. 29: ಕೇಂದ್ರ ಆರೋಗ್ಯ ಇಲಾಖೆಯ ಕ್ಷಯರೋಗ ವಿಭಾಗದ ಮಾರ್ಗಸೂಚಿಯಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜು. 2 ರಿಂದ 13 ರವರೆಗೆ ಸಕ್ರಿಯ ಕ್ಷಯರೋಗ ನಿಯಂತ್ರಣಾ ಆಂದೋಲನ ಕಾರ್ಯಕ್ರಮ ನಡೆಯಲಿದ್ದು, ಅದರಂತೆ ಕೊಡಗಿನ ಮೂರು ತಾಲೂಕುಗಳಲ್ಲಿ ಆಯ್ದ 1.31 ಲಕ್ಷ ಮನೆಗಳಲ್ಲಿ ಸಮೀಕ್ಷೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಎ.ಸಿ. ಶಿವಕುಮಾರ್ ಅವರು, ಜಿಲ್ಲೆಯಲ್ಲಿ ಒಟ್ಟು 6,06829 ಜನಸಂಖ್ಯೆಯಿದ್ದು, ರಾಜ್ಯ ಕ್ಷಯ ರೋಗದ ಮಾರ್ಗಸೂಚಿಯನ್ವಯ ಈ ಪೈಕಿ ಶೇ. 20 ರಷ್ಟು ಜನಸಂಖ್ಯೆಯನ್ನು ಸಮೀಕ್ಷೆಗಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅದರಲ್ಲೂ ದುರ್ಬಲ ಹಾಗೂ ಹಿಂದುಳಿದ ಪ್ರದೇಶಗಳಾದ ಕಾಲೋನಿಗಳು, ಲೈನ್‍ಮನೆಗಳು, ಸ್ಲಂಗಳು ಇರುವ ಪ್ರದೇಶಗಳನ್ನು ಗಮನದಲ್ಲಿರಿಸಿಕೊಂಡು ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಅದರಂತೆ ಮಡಿಕೇರಿ ತಾಲೂಕಿನ 38,983 ವೀರಾಜಪೇಟೆ ತಾಲೂಕಿನ 36,976 ಹಾಗೂ ಸೋಮವಾರಪೇಟೆ ತಾಲೂಕಿನ 54, 943 ಜನರನ್ನು ಆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಕಿರಿಯ ಪುರುಷ ಆರೋಗ್ಯ ಸಹಾಯಕಿಯರು, ಹಿರಿಯ ಮಹಿಳಾ ಹಾಗೂ ಪುರುಷ ಆರೋಗ್ಯ ಸಹಾಯಕರು ಭೇಟಿ ಮಾಡಿ ಮಾಹಿತಿ ಸಂಗ್ರಹಿಲಿದ್ದಾರೆ. ಈ ಬಗ್ಗೆ ಈಗಾಗಲೇ ತಾಲೂಕುವಾರು ತರಬೇತಿಗಳನ್ನು ನೀಡಲಾಗಿದ್ದು, ಜಿಲ್ಲೆಯಲ್ಲಿ ಉದ್ದೇಶಿತ 39675 ಮನೆಗಳಿಗೆ ಈ ತಂಡಗಳು ಭೇಟಿ ನೀಡಿ ಕ್ಷಯರೋಗದ ಆಂದೋಲನ ನಡೆಸಲಿವೆ ಎಂದು ವಿವರಿಸಿದರು.

ಉದ್ದೇಶಿತ ಮನೆಗಳಿಗೆ ಆಶಾ ಕಾರ್ಯಕರ್ತೆಯರ ತಂಡ ಭೇಟಿ ಮಾಡಿ ಕ್ಷಯ ರೋಗದ ಲಕ್ಷಣ, ಚಿಕಿತ್ಸೆ ಬಗ್ಗೆ ಸಮಾಲೋಚಿಸಿ ಅಗತ್ಯ ರೋಗಿಗಳ ಕಫದ ಮಾದರಿಗಳನ್ನು ಸ್ಥಳದಲ್ಲಿಯೇ ಸಂಗ್ರಹಿಸಲಿದ್ದಾರೆ. ಈ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿ ಅಗತ್ಯವಿರುವವರಿಗೆ ತಕ್ಷಣದಿಂದಲೇ ಚಿಕಿತ್ಸೆ ಪ್ರಾರಂಭಿಸಲಾಗುತ್ತದೆ ಎಂದು ಅವರು ಹೇಳಿದರು.

ಪ್ರಸಕ್ತ ಜಿಲ್ಲಾಸ್ಪತ್ರೆಯಲ್ಲೇ ಕಫದ ಮಾದರಿ ಪರೀಕ್ಷೆಗೆ ಅಗತ್ಯವಿರುವ ತಂತ್ರಜ್ಞಾನವಿರುವದಾಗಿ ತಿಳಿಸಿದ ಅವರು, ಕ್ಷಯ ರೋಗದ ಲಕ್ಷಣ ಕಂಡು ಬಂದವರಿಗೆ 6-8 ತಿಂಗಳವರೆಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದಲ್ಲದೆ, ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆಯುವವರಿಗೆ ಪೌಷ್ಟಿಕಾಂಶದ ಆಹಾರ ಸೇವನೆಗಾಗಿ ಕೇಂದ್ರ ಸರಕಾರ ಮಾಸಿಕ 500 ರೂ.ಗಳ ಪ್ರೋತ್ಸಾಹಧನವನ್ನೂ ನೀಡಲಿದೆ ಎಂದರು.

ಜಿಲ್ಲೆಯಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ 412 ಮಂದಿ ಕ್ಷಯ ರೋಗಿಗಳನ್ನು ಪತ್ತೆ ಮಾಡಲಾಗಿದ್ದು, ಈ ಪೈಕಿ ಶೇ. 85 ರಷ್ಟು ಮಂದಿ ಗುಣಮುಖರಾಗಿದ್ದಾರೆ. ಶೇ. 5 ರಷ್ಟು ಮಂದಿ ವಿವಿಧ ಕಾರಣಗಳಿಗಾಗಿ ಅರ್ಧದಲ್ಲೇ ಚಿಕಿತ್ಸೆಯನ್ನು ಸ್ಥಗಿತಗೊಳಿಸಿದ್ದು, ಶೇ. 5 ರಷ್ಟು ಮಂದಿ ಸಾವಿಗೀಡಾಗಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಶ್ವ ಸಂಸ್ಥೆಯು 2035ರ ವೇಳೆಗೆ ವಿಶ್ವವನ್ನು ಕ್ಷಯರೋಗ ಮುಕ್ತಗೊಳಿಸುವ ಗುರಿ ಹೊಂದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಅದಕ್ಕಿಂತ 10 ವರ್ಷ ಮುಂಚಿತವಾಗಿಯೇ ಭಾರತವನ್ನು ಕ್ಷಯರೋಗ ಮುಕ್ತ ದೇಶವನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದು, ಈ ಹಿನ್ನೆಲೆಯಲ್ಲಿ ವರ್ಷಕ್ಕೆ ಎರಡು ಬಾರಿ ಕ್ಷಯ ರೋಗಿಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡುವ ಆಂದೋಲವನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರಲ್ಲದೆ, ಇದೇ ಉದ್ದೇಶದಿಂದ ಕೇಂದ್ರ ಸರಕಾರ ಚಿಕಿತ್ಸೆ ಪಡೆದುಕೊಳ್ಳುವವರಿಗೆ ಪ್ರೋತ್ಸಾಧನವನ್ನೂ ನೀಡುತ್ತಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಿಬ್ಬಂದಿ ಕಾರ್ಯಪ್ಪ ಉಪಸ್ಥಿತದ್ದರು.