*ಗೋಣಿಕೊಪ್ಪಲು, ಜೂ. 29 : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೈತರ ಸಂತೆ ನಡೆಸಲು ನಿರ್ಮಾಣವಾದ ಕಟ್ಟಡವನ್ನು ಗೋಣಿಕೊಪ್ಪಲು ಪಂಚಾಯಿತಿ ಮತ್ತೆ ರೈತರ ಸಂತೆ ನಡೆಸಬೇಕು ಎಂಬ ಹೈ ಕೋರ್ಟ್ ಆದೇಶ ರೈತ ಬೆಳೆದ ಬೆಳೆಗಳ ವ್ಯಾಪಾರಕ್ಕೆ ಮಾರುಕಟ್ಟೆ ತೆರೆದುಕೊಳ್ಳುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಲಿದೆ. ಆದರೆ ಇದರಿಂದ ಕಟ್ಟಡದ 23 ಮಳಿಗೆಗಳಲ್ಲಿ 10 ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದವರನ್ನು ಅತಂತ್ರವಾಗಿಸಿದೆ.

ಗೋಣಿಕೊಪ್ಪಲು ಪಂಚಾಯಿತಿ ವ್ಯಾಪ್ತಿಯ ಮಾರುಕಟ್ಟೆ ಆವರಣದಲ್ಲಿ 2005ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ನಬಾರ್ಡ್ ಯೋಜನೆಯಡಿ 16 ಲಕ್ಷ ಅನುಧಾನದಲ್ಲಿ ರೈತರ ಸಂತೆ ನಡೆಸಲು ತೆರೆದ ಕಟ್ಟಡವನ್ನು ನಿರ್ಮಿಸಲಾಯಿತು. ಕೃಷಿ ಉತ್ವನ್ನ ಮಾರುಕಟ್ಟೆ ಸಮಿತಿ ಬೋಸ್ ದೇವಯ್ಯ ಅಧ್ಯಕ್ಷತೆಯಲ್ಲಿ 2006ರಲ್ಲಿ ಗೋಣಿಕೊಪ್ಪಲು ಪಂಚಾಯಿತಿಗೆ ಈ ಕಟ್ಟಡವನ್ನು ಹಸ್ತಾಂತರಿಸಿದರು.ರೈತರೇ ಬೆಳೆದ ಹಣ್ಣು, ತರಕಾರಿ, ಭತ್ತ, ಕಾಫಿ ಮತ್ತು ಕಾಳು ಮೆಣಸು ಮಾರಾಟಗಳಿಗೆ ಪಂಚಾಯಿತಿ ಅನುವು ಮಾಡಿಕೊಡಬೇಕಾಗಿತ್ತು. ಆದರೆ ಕಳೆದ 10 ವರ್ಷಗಳಿಂ0ದ ಈ ಕಟ್ಟಡದಲ್ಲಿ ಬಟ್ಟೆ, ಚಪ್ಪಲಿ ವ್ಯಾಪಾರಗಳು ಸೇರಿದಂತೆ ಸೈಕಲ್ ರಿಪೇರಿ, ಕ್ಯಾಂಟೀನ್‍ಗಳು ನಡೆಯುತ್ತಿದೆ. ಇದನ್ನು ಮನಗಂಡು ಪ್ರಗತಿಪರ ರೈತರು ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ದೂರು ನೀಡಿದರು. ರೈತರ ದೂರಿಗೆ ಸ್ಪಂದಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪಂಚಾಯಿತಿಗೆ ನೊಟೀಸ್ ನೀಡಿತ್ತು. ಇದಕ್ಕೆ ಸ್ಪಂದಿಸದ ಪಂಚಾಯಿತಿಯ ವಿರುದ್ಧ ಸಮಿತಿ 2013ರಲ್ಲಿ ಶಾಸಕ ಕೆ.ಜಿ. ಬೋಪಯ್ಯ ಮಾರ್ಗದರ್ಶನ ದಂತೆ ಮತ್ತು ವರ್ತಕರ ಸಂಘದ ನಿರ್ದೇಶಕ ಕಿಲನ್ ಗಣಪತಿ ಸಲಹೆಯಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಂದಿನ ಅಧ್ಯಕ್ಷ ಪಟ್ರಪಂಡ ರಘು ನಾಣಯ್ಯ ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ರಘು ನಾಣಯ್ಯನವರ ನಂತರ ಅಚ್ಚಪಂಡ ಮಹೇಶ್,

(ಮೊದಲ ಪುಟದಿಂದ) ಮಾಚಿಮಂಡ ವಸಂತ, ನೆಲ್ಲೀರ ಚಲನ್, ಮನೆಯಪಂಡ ದೇವಯ್ಯ, ಇಂದಿನ ಅಧ್ಯಕ್ಷ ಮಾಚಿಮಂಡ ಸುವೀನ್ ಗಣಪತಿ ಅವರುಗಳ ಸತತ 6 ವರ್ಷಗಳ ಹೋರಾಟದ ಫಲ ಪ್ರಸ್ತುತ ಹೈ ಕೋರ್ಟ್ ಆದೇಶದಿಂದ ದೊರೆತ್ತಿದೆ. 3 ತಿಂಗಳ ಅವದಿಯೊಳಗೆ ಕಟ್ಟಡದಲ್ಲಿರುವ ಮಳಿಗೆಗಳನ್ನು ತೆರವುಗೊಳಿಸಿ ರೈತರ ಸಂತೆ ನಡೆಸುವಂತೆ ಕೋರ್ಟ್ ಆದೇಶ ನೀಡಿದೆ. ಇದರಿಂದ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಅನುಕೂಲ ವಾಗಲಿದ್ದು, ರೈತರ ಸಂತೋಷವನ್ನು ಹೆಚ್ಚಿಸಿದೆ.

ಆದರೆ ಇಲ್ಲಿ ಕಳೆದ 10 ವರ್ಷಗಳಿಂದ ಬಟ್ಟೆ, ಚಪ್ಪಲಿ ಇನ್ನಿತರ ವ್ಯಾಪಾರಗಳನ್ನು ನಡೆಸುತ್ತಿರುವ ವರ್ತಕರು ಇದೀಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪಂಚಾಯಿತಿ ಬದಲಿ ವ್ಯವಸ್ಥೆ ಮಾಡಿಕೊಡಬೇಕಾಗಿದೆ. ವ್ಯಾಪಾರ ನಡೆಸಲು ವರ್ತಕರಿಂದ ಪಂಚಾಯಿತಿ ನಿತ್ಯ ಸುಂಕ ಎಂದು ಒಂದು ಮಳಿಗೆಗೆ 30 ರಿಂದ 50 ರೂಪಾಯಿ ಮುಂಗಡ ಹಣವಾಗಿ 50 ಸಾವಿರ ರೂಪಾಯಿಯನ್ನು ಪಡೆದು ಕೊಂಡಿದೆ. ಇದರಿಂದ ಪಂಚಾಯಿತಿ ಇಲ್ಲಿನ 23 ಮಳಿಗೆಗಳಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರಿಗೆ ಬೇರೆಡೆ ಅನುಕೂಲ ಕಲ್ಪಿಸಿ ಆರ್.ಎಂ.ಸಿ. ನಿರ್ಮಿಸಿದ ಕಟ್ಟಡದಲ್ಲಿ ಖಡ್ಡಾಯವಾಗಿ ಮೂರು ತಿಂಗಳ ಒಳಗೆ ರೈತರ ಸಂತೆ ನಡೆಸಬೇಕೆಂಬ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾಗಿದೆ.

ಮಾಚಿಮಂಡ ಸುವೀನ್ ಗಣಪತಿ, ಅಧ್ಯಕ್ಷರು, ಆರ್.ಎಂ.ಸಿ. ಯಿಂದ ನಬಾರ್ಡ್ ಯೋಜನೆಯಲ್ಲಿ ನಿರ್ಮಿತವಾದ ಕಟ್ಟಡವನ್ನು ಪಂಚಾಯಿತಿಗೆ ವಹಿಸಲಾಗಿತ್ತು. ಇಲ್ಲಿ ರೈತರ ಸಂತೆ ನಡೆಸಲು ಕ್ರಮ ಕೈಗೊಳ್ಳಬೇಕಾಗಿದೆ. ಆದರೆ ಇಲ್ಲಿ ಇತರೆ ಗೃಹ ಉಪಯೋಗಿ ವಸ್ತುಗಳ ಮಾರಾಟಕ್ಕೆ ಮುಂದಾಗಿದ್ದು, ಇದನ್ನು ಖಂಡಿಸಿ ನ್ಯಾಯಾಲಯದ ಮೆಟ್ಟಿಲು ಏರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಸತತ 6 ವರ್ಷಗಳ ಹೋರಾಟದಿಂದ ಆರ್.ಎಂ.ಸಿ. ಪರ ತೀರ್ಪು ನೀಡುವ ಮೂಲಕ ಜಯ ತಂದುಕೊಟ್ಟಿದೆ. ಇದು ರೈತರಿಗೆ ಅನುಕೂಲಕರವಾಗಿದ್ದು, ಸಂತಸ ತರುವ ವಿಚಾರವಾಗಿದೆ.

ಸೋಮಯ್ಯ, ರೈತ : ತೆರೆದ ಮಾರುಕಟ್ಟೆ ನಿರ್ಮಾಣವಾದರೆ ರೈತರಿಗೆ ಅನುಕೂಲಕರ. ನಾವು ಬೆಳೆದ ಬೆಳೆಗಳನ್ನು ನೇರವಾಗಿ ಮಾರಾಟ ಮಾಡಿ ಲಾಭಗಳಿಸಬಹುದು. ಆರ್.ಎಂ.ಸಿ. ಕಟ್ಟಡ ನಿರ್ಮಿಸುವ ಮೂಲಕ ಈ ವ್ಯವಸ್ಥೆ ಕಲ್ಪಿಸಿದರೂ, ಗೋಣಿಕೊಪ್ಪಲು ಪಂಚಾಯಿತಿ ಇದಕ್ಕೆ ಅವಕಾಶ ನೀಡಲಿಲ್ಲ. ಈ ಕಟ್ಟಡದಲ್ಲಿ ಕೃಷಿಯೇತರ ವಸ್ತುಗಳ ಮಾರಟಕ್ಕೆ ಅವಕಾಶ ನೀಡಲಾಯಿತು. ಇದೀಗ ನ್ಯಾಯಾಲಯದ ತೀರ್ಪು ರೈತರಾದ ನಮಗೆ ಸಂತೋಷ ತಂದಿದೆ.

ವರ್ತಕರು : ನಮಗೆ ಈ ಬಗ್ಗೆ ಮಾಹಿತಿ ಇಲ್ಲ. ಹಿಂದೊಮ್ಮೆ ಈ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಪಂಚಾಯಿತಿ ನಮಗೆ ಅನುಮತಿ ನೀಡಿ ತೆರೆದ ಕಟ್ಟಡದಲ್ಲಿ ನಾವೇ ಸ್ವಂತ ಖರ್ಚಿನಿಂದ ರೋಲಿಂಗ್ ಶೆಟರ್ಸ್ ಅನ್ನು ಅಳವಡಿಸಿಕೊಂಡೆವು. ಪಂಚಾಯಿತಿ ಗೊಡೆ ನಿರ್ಮಿಸಿ ಕೊಟ್ಟಿತು. ನಾವು ಪಂಚಾಯಿತಿಗೆ ನಿತ್ಯ ಸುಂಕ 30 ರೂಪಾಯಿ ನೀಡುತ್ತಿದ್ದೇವೆ. ಹಾಗೂ ಮುಂಗಡ ಹಣ ಎಂದು 50 ಸಾವಿರ ನೀಡಿದ್ದೇವೆ.

ವರದಿ : ಎನ್.ಎನ್. ದಿನೇಶ್