ಮಡಿಕೇರಿ, ಜು. 2: ಪೆರಾಜೆ ಗ್ರಾಮದಲ್ಲಿ ನೂತನ ಸಹಕಾರ ಸಂಘ ರಚನೆಯಾಗುವ ಹಿನ್ನೆಲೆ ಪೆರಾಜೆ ಕಾರ್ಯಕ್ಷೇತ್ರದ ನಿರ್ದೇಶಕರುಗಳನ್ನು ಬೀಳ್ಕೊಡುವ ಕಾರ್ಯಕ್ರಮ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಚಂದ್ರ ಕಳಗಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಉಪಾಧ್ಯಕ್ಷ ಹೊನ್ನಪ್ಪ ಅಮಚೂರುರವರಿಗೆ ಮತ್ತು ನಿರ್ದೇಶಕರುಗಳಾದ ಮೋನಪ್ಪ ಮಾಸ್ತರ್, ರೇಣುಕಾ ಕುಂದಲ್ಪಾಡಿ, ವಿನಯಕುಮಾರ್ ನೆಡ್ಚಿಲ್ ಹಾಗೂ ಸಂಘದಲ್ಲಿ 37 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿಬ್ಬಂದಿ ಕುಶಾಲಪ್ಪ ಸಿ.ಆರ್. ಇವರುಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಆನಂದ ಬಿ.ಕೆ. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ ಸನ್ಮಾನ ಕಾರ್ಯಕ್ರಮ ನಡೆಯಿತು.

ಸನ್ಮಾನ ಸ್ವೀಕರಿಸಿದ ಸಂಘದ ಹಿರಿಯ ಸಿಬ್ಬಂದಿ ಕುಶಾಲಪ್ಪ ಸೇವೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಂಘದ ಅಧ್ಯಕ್ಷ ಬಾಲಚಂದ್ರ ಕಳಗಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಯಾವದೇ ವ್ಯಕ್ತಿ ಸಮಾಜಕ್ಕೆ ಮಾದರಿಯಾಗಿರುತ್ತಾರೆ ಎಂದರು. ಪೆರಾಜೆ ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಕುರಿತು ಮಾತನಾಡಿ, ಅವರುಗಳಿಗೆ ಶುಭ ಹಾರೈಸಿದರು. ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.