ವೀರಾಜಪೇಟೆ, ಜು.3: ಕೊಡಗು ಕೇರಳ ಗಡಿ ಪ್ರದೇಶದ ಸಂಚಾರ ಬಂದ್ ಆಗಿರುವ ರಾಜ್ಯ ಹೆದ್ದಾರಿ ರಸ್ತೆಯ ಮಾಕುಟ್ಟಕ್ಕೆ ಇಂದು ಭೇಟಿ ನೀಡಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ರಸ್ತೆಯ ಕಾಮಗಾರಿಯನ್ನು ವೀಕ್ಷಿಸಿ ಲೋಕೋಪಯೋಗಿ ಇಲಾಖೆ, ಮಡಿಕೇರಿಯ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ತಂತ್ರಜ್ಞರಿಂದ ರಸ್ತೆ ಗುಣಮಟ್ಟದ ಧೃಢೀಕರಣದ ಪತ್ರಗಳ ಆಧಾರದ ಮೇಲೆ ಇನ್ನು ಎರಡು ದಿನಗಳಲ್ಲಿ ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುವದು ಎಂದರು.

ಈಗಾಗಲೇ ಮಾಕುಟ್ಟ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಕಾಮಗಾರಿ ಪೂರ್ಣವಾಗಿದ್ದು ರಸ್ತೆಯಲ್ಲಿ ಬಿದ್ದಿದ್ದ ಮರಗಳನ್ನು ರಸ್ತೆ ಬದಿಗೆ ಸರಿಸಲಾಗಿದೆ. ರಸ್ತೆ ದುರಸ್ತಿಯ ಕಾರ್ಯ ಎರಡನೇ ಹಂತದಲ್ಲಿ ಕಾಮಗಾರಿ ಪೂರ್ಣಗೊಂಡ ನಂತರ ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವದು. ಮಾಕುಟ್ಟ ರಸ್ತೆಯ ಶಾಶ್ವತ ಪರಿಹಾರ ಕಾರ್ಯಕ್ಕಾಗಿ ರೂ ಆರು ಕೋಟಿ ವೆಚ್ಚದ ಕಾಮಗಾರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಶ್ರೀವಿದ್ಯಾ ತಿಳಿಸಿದರು.

ಇಂದು ಜಿಲ್ಲಾಧಿಕಾರಿ ಜೊತೆಯಲ್ಲಿ ತಾಲೂಕು ತಹಶೀಲ್ದಾರ್ ಆರ್.ಗೋವಿಂದರಾಜ್, ಲೋಕೋಪಯೋಗಿ ಇಲಾಖೆಯ ಜಿಲ್ಲಾ ಅಭಿಯಂತರ ಪ್ರಭು, ಸಹಾಯಕ ಅಭಿಯಂತರ ಸುರೇಶ್ ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ, ಅರಣ್ಯ ವಿಭಾಗಾಧಿಕಾರಿ ಮರಿಯಾ ಕ್ರಿಸ್ತರಾಜು ಮತ್ತಿತರರು ಹಾಜರಿದ್ದರು.

ಪೊಲೀಸರು ತರಾಟೆಗೆ

ಜಿಲ್ಲಾಧಿಕಾರಿ ಅವರು ಮಾಕುಟ್ಟಕ್ಕೆ ತೆರಳುವ ಸಂದರ್ಭದಲ್ಲಿ ಪೆರುಂಬಾಡಿ ಚೆಕ್ ಪೋಸ್ಟ್‍ನಲ್ಲಿದ್ದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಯಾರೂ ಹಣ ಪಡೆದು ಲಘುವಾಹನಗಳನ್ನು ಮಾಕುಟ್ಟಕ್ಕೆ ಬಿಡುವಂತಿಲ್ಲ ಎಂದು ಆದೇಶಿಸಿದರು.

ಕೇರಳದ ಕೂಟುಪೊಳೆ ಹಾಗೂ ಮಾಕುಟ್ಟದ ನಿವಾಸಿಗಳು ಮಾಕುಟ್ಟದಲ್ಲಿ ಹಾನಿಗೊಳಗಾದ ರಸ್ತೆಯನ್ನು ಸುಗಮಗೊಳಿಸಿ ಲಾರಿ ಬಸ್ಸು ಇತರ ಲಘುವಾಹನಗಳು ಸಂಚರಿಸುವಂತೆ ಜಿಲ್ಲಾಧಿಕಾರಿಯವರು ತುರ್ತು ಕ್ರಮ ಕೈಗೊಳ್ಳುವಂತೆ ಖುದ್ದು ಮನವಿ ಮಾಡಿದರು.