ಮಡಿಕೇರಿ, ಜು. 9: ಸ್ವಾರ್ಥವನ್ನು ಪರಿಗಣಿಸದೇ ನಮ್ಮ ಕೆಲಸಗಳೊಂದಿಗೆ ಬೇರೆಯವರಿಗೆ ಸಹಾಯ ಮಾಡುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗುವ ನಿಟ್ಟಿನಲ್ಲಿ ಹೆಜ್ಜೆಯಿರಿಸುವಂತೆ ರೋಟರಿ ಜಿಲ್ಲೆ 3181ರ ಮುಖ್ಯ ಸಲಹೆಗಾರ ಜಿ.ಕೆ. ಬಾಲಕೃಷ್ಣನ್ ಕರೆ ನೀಡಿದ್ದಾರೆ.

ನಗರದ ಗೌಡ ಸಮಾಜದಲ್ಲಿ ಆಯೋಜಿತ ರೋಟರಿ ಮಿಸ್ಟಿ ಹಿಲ್ಸ್‍ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮಗಾಂಧೀಜಿ, ಮದರ್ ತೆರೆಸಾ ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳನ್ನು ಕಂಡಿರುವ ಭಾರತದ ಪ್ರಜೆಗಳು ಸ್ವಾರ್ಥ ರಹಿತವಾಗಿ ಸಮಾಜದಲ್ಲಿ ಅಗತ್ಯವುಳ್ಳವರ ಸೇವೆಗೆ ಮುಂದಡಿಯಿಡಬೇಕಾದ ಕರ್ತವ್ಯವನ್ನು ಪಾಲಿಸಬೇಕೆಂದು ಹೇಳಿದರು.

ನಂಬಿಕೆ, ವಿಶ್ವಾಸ, ಭದ್ರತೆ, ದೃಢತೆ, ಧೈರ್ಯ, ದೃಢನಿಶ್ಚಯ, ಅರ್ಹತೆ, ಅನುಕಂಪ, ನಡತೆ ಈ ನವ ಗುಣಗಳನ್ನು ಅಳವಡಿಸಿ ಕೊಂಡಿದ್ದೇ ಆದಲ್ಲಿ ಓರ್ವ ನಾಯಕ ರೂಪುಗೊಳ್ಳುತ್ತಾನೆ ಎಂದು ಹೇಳಿದ ಬಾಲಕೃಷ್ಣನ್, ಮಾನವರಲ್ಲಿನ ರಾಕ್ಷಸೀ ಗುಣ ತೊಲಗಿ ಮನುಷ್ಯತ್ವದ ಗುಣ ಕಂಡುಬರಬೇಕೆಂದು ಆಶಿಸಿದರು.

ವ್ಯಕ್ತಿತ್ವ ಓರ್ವ ಉತ್ತಮ ಮನುಷ್ಯನನ್ನು ರೂಪುಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟ ಬಾಲಕೃಷ್ಣನ್, ವ್ಯಕ್ತಿತ್ವವನ್ನು ಕಾಪಾಡಿಕೊಂಡಲ್ಲಿ ಸಮಾಜ ಅಂಥ ವ್ಯಕ್ತಿಯನ್ನು ಗೌರವಿಸುತ್ತದೆ ಎಂದೂ ಹೇಳಿದರು. 113 ವರ್ಷಗಳ ಇತಿಹಾಸ ಹೊಂದಿರುವ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿಯಲ್ಲಿ ಹಸಿರು ಪರಿಸರ, ಶಾಂತಿ, ಸಹಭಾಳ್ವೆ, ವಿದ್ಯೆ, ಪೆÇೀಲಿಯೋ ನಿರ್ಮೂಲನೆ ಯಂತಹ ಸಾಮಾಜಿಕ ಕಳಕಳಿಯ ಕಾರ್ಯಯೋಜನೆಗಳೂ ಸೇರಿದಂತೆ ಅನೇಕ ಮಹತ್ವದ ಕಾರ್ಯಕ್ರಮ ಗಳನ್ನು ಜಾರಿಗೊಳಿಸಲಾಗಿದ್ದು, ಬೇರೆ ಯಾವದೇ ಸಂಘಟನೆಗಳ ಸದಸ್ಯರು ವಿಶ್ವವ್ಯಾಪಿ ಮಾಡದಂತಹ ಕಾರ್ಯಯೋಜನೆಗಳು ರೋಟರಿ ಸದಸ್ಯರಿಂದ ಅನುಷ್ಠಾನಗೊಂಡಿದೆ ಎಂದು ಶ್ಲಾಘಿಸಿದರು.

ರೋಟರಿಯಲ್ಲಿ ಪ್ರತೀ ವರ್ಷ ಅಧಿಕಾರ ಬದಲಾವಣೆ ಬಗ್ಗೆ ಪ್ರಸ್ತಾಪಿಸಿದ ಜಿ.ಕೆ.ಬಾಲಕೃಷ್ಣನ್, ಇದು ನಾಯಕರು ಬದಲಾಗುವ ಪ್ರಕ್ರಿಯೆಯೇ ವಿನಾ ನಾಯಕತ್ವ ಬದಲಾಗುವದಿಲ್ಲ. ರೋಟರಿಗೆ ಹೊಸ ಹೊಸ ನಾಯಕರು ಪ್ರತೀ ವರ್ಷ ಸೇರ್ಪಡೆಯಾಗುತ್ತಲೇ ಇರುತ್ತಾರೆ ಎಂದು ಹೇಳಿದರು.

ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ್ ಮಾತನಾಡಿ, ಈ ವರ್ಷ ರೋಟರಿ ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಕಾಯಕಲ್ಪ ನೀಡುವ ಯೋಜನೆ ಹಮ್ಮಿಕೊಳ್ಳ ಲಾಗಿದ್ದು ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ಇಂತಹ ಅಂಗನವಾಡಿಗಳನ್ನು ಗುರುತಿಸುವ ಕಾರ್ಯ ಪ್ರಾರಂಭ ಗೊಂಡಿದೆ ಎಂದು ಹೇಳಿದರು.

ರೋಟರಿ ಮಿಸ್ಟಿ ಹಿಲ್ಸ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜಿ.ಆರ್.ರವಿಶಂಕರ್ ಮಾತನಾಡಿ, 13 ವರ್ಷಗಳ ಇತಿಹಾಸ ಹೊಂದಿರುವ ಮಿಸ್ಟಿ ಹಿಲ್ಸ್ ನ ವರ್ಚಸ್ಸಿಗೆ ಧಕ್ಕೆ ಬಾರದಂತೆ ಮುಂದಿನ ವರ್ಷದಲ್ಲಿ ಹಲವಾರು ಕಾರ್ಯಕ್ರಮ ಆಯೋಜಿ ಸುವದಾಗಿ ಭರವಸೆ ನೀಡಿದರು.

ರೋಟರಿ ಮಿಸ್ಟಿ ಹಿಲ್ಸ್‍ನ ನಿರ್ಗಮಿತ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಕಳೆದೊಂದು ವರ್ಷದಲ್ಲಿ ಮಿಸ್ಟಿ ಹಿಲ್ಸ್ ವತಿಯಿಂದ ಕೈಗೊಂಡ ಅನೇಕ ಸಾಮಾಜಿಕ ಕಾರ್ಯ ಯೋಜನೆಗಳು ಸಾರ್ವಜನಿಕ ರಿಂದಲೂ ಪ್ರಶಂಸೆಗೆ ಪಾತ್ರವಾಗಿದ್ದು ಮಿಸ್ಟಿ ಹಿಲ್ಸ್ ನಡಿಗೆ ಜನರ ಕಡೆಗೆ ಎಂಬ ತನ್ನ ಕನಸು ಸದಸ್ಯರ ಒಗ್ಗಟ್ಟಿನಿಂದ ನನಸಾಗಿದೆ. ಬದಲಾವಣೆ ಎಂಬದು ಜಗದ ನಿಯಮದಂತೆ ರೋಟರಿ ನಿಯಮ ಕೂಡ ಆಗಿದ್ದು ಕಾಲಚಕ್ರದಂತೆ ರೋಟರಿ ಅಧಿಕಾರದ ಚಕ್ರವೂ ಪ್ರತೀವರ್ಷ ಬದಲಾಗುತ್ತಾ ಹೊಸ ಚಿಂತನೆಗಳಿಗೆ ಅವಕಾಶ ಕೊಡುತ್ತಿರುವದು ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ಜೋನಲ್ ಲೆಫ್ಟಿನೆಂಟ್ ಎನ್.ಪಿ. ಚೀಯಣ್ಣ, ನಿರ್ಗಮಿತ ಕಾರ್ಯದರ್ಶಿ ಪಿ.ಎಂ. ಸಂದೀಪ್ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಎಂ.ಯು. ಮಹೇಶ್ ವಂದಿಸಿದರು. ಇದೇ ಸಂದರ್ಭ ಮಡಿಕೇರಿ ತಾಲೂಕಿನ ವಿವಿಧ ಅಂಗನವಾಡಿಗಳಿಗೆ ಅಗತ್ಯ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಯಿತು. ರೋಟೋ ಮಿಸ್ಟ್ ವಾರ್ತಾ ಸಂಚಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಜಿಲ್ಲೆಯ ವಿವಿಧ ರೋಟರಿ ಕ್ಲಬ್‍ಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿ ದ್ದರು.