ಸಿದ್ದಾಪುರ, ಜು. 9: ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ ಕಳೆದ ಒಂದು ವಾರಗಳಿಂದ ಮರಿಯಾನೆ ಸೇರಿದಂತೆ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದೆ.ಗುಹ್ಯ ಗ್ರಾಮದ ಕಾಫಿ ಬೆಳೆಗಾರರಾದ ನರೇಂದ್ರ ನಾಯ್ಡು, ನಡಿಕೇರಿಯಂಡ ಪೊನ್ನಪ್ಪ, ಎ.ಟಿ ಕಾರ್ಯಪ್ಪ, ನಂದ ಅಯ್ಯಪ್ಪರವರ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸಿದೆ. ಇದೀಗ ಹಾಡಹಗಲೇ ಗುಹ್ಯ ಸರಕಾರಿ ಪ್ರಾಥಮಿಕ ಶಾಲೆಯ ಹಿಂಭಾಗದ ಕಾಫಿ ತೋಟದಲ್ಲಿ ಬೀಡು ಬಿಟ್ಟು ಗುಹ್ಯ ರಸ್ತೆಯಲ್ಲಿ ರಾಜಾರೋಷವಾಗಿ ಸುತ್ತಾಡುತ್ತ ಆತಂಕ ಸೃಷ್ಟಿಸಿದೆ. ಅದೃಷ್ಟವಶಾತ್ ಶಾಲೆಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಯಾವದೇ ಅಪಾಯ ಸಂಭವಿಸಲಿಲ್ಲ. ಗುಹ್ಯ ಹಾಗೂ ಕಕ್ಕಟ್ಟು ಕಾಡುವಿನಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.ಸಂಜೆ ಮನೆಯಿಂದ ಹೊರಬಾರದಂತಹ ಕಫ್ರ್ಯೂ ವಾತಾವರಣ ನಿರ್ಮಾಣ ವಾದಂತಾಗಿದೆ.

-ವಾಸು