ಕುಶಾಲನಗರ, ಜು. 10: ಕುಶಾಲನಗರದ ರೋಟರಿ ಇನ್ನರ್ ವ್ಹೀಲ್ ಕ್ಲಬ್‍ನ 2018-19 ರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ರೋಟರಿ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ನೂತನ ಸಾಲಿನ ಅಧ್ಯಕ್ಷೆ ಸುನೀತಾ ಮಹೇಶ್ ನಾಲ್ವಡೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕ್ಲಬ್‍ನ ವತಿಯಿಂದ ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಬಡಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವದರೊಂದಿಗೆ ಅವರ ಮೂಲಭೂತ ಅಗತ್ಯತೆಗಳನ್ನು ಪೂರೈಸಲು ಕ್ಲಬ್ ಕೈಜೋಡಿಸುತ್ತಿದೆ. ಬಡ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರಗಳು, ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ಈ ಕಾರ್ಯಕ್ರಮಗಳು ಮುಂದುವರೆಯಲಿವೆ ಎಂದರು.

ಕ್ಲಬ್‍ನ ನಿರ್ಗಮಿತ ಅಧ್ಯಕ್ಷೆ ರೇಖಾ ಗಂಗಾಧರ್ ತಮ್ಮ ಅವಧಿಯಲ್ಲಿ ನಡೆದ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ಒದಗಿಸಿದರು. ಜಿಲ್ಲಾ ಪದಾಧಿಕಾರಿ ಪೂರ್ಣಿಮಾ ರವಿ ಅವರು ನೂತನ ಅಧ್ಯಕ್ಷೆ ಸುನೀತಾ ಮಹೇಶ್ ನಾಲ್ವಡೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕ್ಲಬ್‍ಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಸಸಿಗಳನ್ನು ವಿತರಿಸಲಾಯಿತು.

ಕ್ಲಬ್‍ನ ಉಪಾಧ್ಯಕ್ಷೆ ಆರತಿ ಹರಿಶೆಟ್ಟಿ, ರೇಖಾ ಗಂಗಾಧರ್, ಕಾರ್ಯದರ್ಶಿ ಸಂಧ್ಯಾ ಪ್ರಮೋದ್, ತೇಜಸ್ವಿನಿ, ಜಾಸ್ಮಿನ್ ಪ್ರಕಾಶ್, ಶಾಲಿನಿ ನರೇಂದ್ರ, ಪೂರ್ಣಿಮಾ ರಾಜೀವ್, ರೋಟರಿ ಕ್ಲಬ್‍ನ ಪ್ರಮುಖರಾದ ಮಹೇಶ್ ನಾಲ್ವಡೆ, ಎಂ.ಜಿ. ಗಂಗಾಧರ್, ಕ್ರ್ರಿಜ್ವಲ್ ಕೋಟ್ಸ್ ಮತ್ತಿತರರು ಇದ್ದರು.