ಮಡಿಕೇರಿ, ಜು. 10: ಕಳೆದ 39 ವರ್ಷಗಳಿಂದ ಬಿ.ಎಸ್.ಎನ್.ಎಲ್. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಚೆಂಬು ಗ್ರಾಮದ ಬೊಳುಗಲ್ಲು ಕುಶಾಲಪ್ಪ ಅವರು ಇತ್ತೀಚೆಗೆ ನಿವೃತ್ತಿಯಾದರು. ಸಂಸ್ಥೆಯಲ್ಲಿ ಲೈನ್‍ಮೆನ್ ಆಗಿ ತಮ್ಮ ವೃತ್ತಿ ಆರಂಭಿಸಿದ ಕುಶಾಲಪ್ಪ ಸೇವೆಯ ಕೊನೆಯ ಹಂತದಲ್ಲಿ ಕಚೇರಿ ಸೂಪರಿಂಟೆಂಡೆಂಟ್ ಆಗಿದ್ದರು.

ಬಿ.ಎಸ್.ಎನ್.ಎಲ್. ನೌಕರರ ಪತ್ತಿನ ಸಹಕಾರ ಸಂಘದಲ್ಲಿ 25 ವರ್ಷಗಳಿಂದ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಕಳೆದ 2 ಅವಧಿಯಲ್ಲಿ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಸೇವೆಯಿಂದ ನಿವೃತ್ತಿ ಹೊಂದಿದ ಕುಶಾಲಪ್ಪ ಅವರಿಗೆ ಇತ್ತೀಚೆಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಎಂ.ಪಿ. ಸುಬ್ಬಯ್ಯ, ಬಿ.ಎಸ್.ಎನ್.ಎಲ್. ಇ.ಯು. ವಲಯ ಕಾರ್ಯದರ್ಶಿ ಸಿ.ಕೆ. ಗುಂಡಣ್ಣ, ಅಖಿಲ ಭಾರತ ಬಿ.ಎಸ್.ಎನ್.ಎಲ್. ಇ.ಯು.ನ ಸಂಘಟನಾ ಕಾರ್ಯದರ್ಶಿ ಹೆಚ್.ವಿ. ಸುದರ್ಶನ್ ಸೇರಿದಂತೆ ಅಧಿಕಾರಿಗಳು, ಸಹೋದ್ಯೋಗಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಿಸಿದ ವಿ.ಜೆ. ಅಂತೋಣಿ ಅವರು ಸ್ವಾಗತಿಸಿ, ವಂದಿಸಿದರು. ಕುಶಾಲಪ್ಪ ಅವರ ಕರ್ತವ್ಯ ನಿಷ್ಠೆಯ ಕುರಿತು ಗಣ್ಯರು ಸಮಾರಂಭದಲ್ಲಿ ಮಾತನಾಡಿದರು.