ಕುಶಾಲನಗರ, ಜು. 10: ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಯೊಂದು ದಿಢೀರನೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಶಿಬಿರದಲ್ಲಿದ್ದ ಮೈಥಿಲಿ (42) ಮೃತಪಟ್ಟ ಸಾಕಾನೆಯಾಗಿದೆ. ಹೃದಯಾಘಾತದಿಂದ ಆನೆ ಸಾವನ್ನಪ್ಪಿದೆ ಎಂದು ವನ್ಯಜೀವಿ ತಜ್ಞ ಡಾ.ಮುಜೀಬ್ ಮಾಹಿತಿ ನೀಡಿದ್ದಾರೆ.

ಕಳೆದ 12 ವರ್ಷಗಳಿಂದ ಮೈಥಿಲಿ ದುಬಾರೆ ಶಿಬಿರದಲ್ಲಿದ್ದು, ಇತರೆ ಆನೆಗಳೊಂದಿಗೆ ಪ್ರವಾಸಿಗರ ಮನಸೂರೆಗೊಳ್ಳುತ್ತಿತ್ತು ಎಂದು ಸಾಕಾನೆ ಶಿಬಿರದ ಸಿಬ್ಬಂದಿಗಳು ತಿಳಿಸಿದ್ದಾರೆ. ಮೃತಪಟ್ಟ ಮೈಥಿಲಿಯ ಮರಣೋತ್ತರ ಪರೀಕ್ಷೆಯನ್ನು ಡಾ. ಮುಜೀಬ್ ಮತ್ತು ತಂಡ ನಡೆಸಿದ್ದು, ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು. ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಮರಿಯಾನೆ ಸೇರಿದಂತೆ ಒಟ್ಟು 30 ಸಾಕಾನೆಗಳನ್ನು ಸಲಹಲಾಗುತ್ತಿತ್ತು. ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ಭೇಟಿ ನೀಡಿದ್ದರು.