ಮಡಿಕೇರಿ, ಜು. 10: ಬಡವರಿಗೆ, ಸಣ್ಣ ವ್ಯಾಪಾರಿಗಳಿಗೆ ಆರ್ಥಿಕವಾಗಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತ ಸರ್ಕಾರ ಮುದ್ರಾ ಯೋಜನೆಯನ್ನು ಜಾರಿಗೊಳಿಸಿದೆ.

ಶಿಶು ಹಂತದಲ್ಲಿ 50 ಸಾವಿರ, ತರುಣ ಹಂತದಲ್ಲಿ 5 ಲಕ್ಷ, ಕಿಶೋರ ಹಂತದಲ್ಲಿ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಕಲ್ಪಿಸುವದು ಮುದ್ರಾ ಯೋಜನೆಯ ಉದ್ದೇಶವಾಗಿದ್ದು, ಅರ್ಹರು ಈ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕಿದೆ ಎಂದು ನಬಾರ್ಡ್‍ನ ಸಹಾಯಕ ಮಹಾಪ್ರಬಂಧಕ ಮುಂಡಂಡ ಸಿ. ನಾಣಯ್ಯ ತಿಳಿಸಿದ್ದಾರೆ.

2015 ರಿಂದ ಇಲ್ಲಿಯವರೆಗೆ ಕೊಡಗು ಜಿಲ್ಲೆಯಲ್ಲಿ 9,475 ಮಂದಿ ಫಲಾನುಭವಿಗಳು ಮುದ್ರಾ ಯೋಜನಾ ಸೌಲಭ್ಯವನ್ನು ಪಡೆದುಕೊಂಡಿದ್ದು, ಸುಮಾರು ರೂ. 118.25 ಕೋಟಿ ಸಾಲ ನೀಡಲಾಗಿದೆ. ಮುದ್ರಾ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ಬಡವರು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ಟಾಂಡ್ ಅಪ್ ಇಂಡಿಯಾ: ಈ ಯೋಜನೆಯಡಿ ವಿಶೇಷವಾಗಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಕನಿಷ್ಟ ರೂ. 10 ಲಕ್ಷದಿಂದ ಗರಿಷ್ಠ ಒಂದು ಕೋಟಿವರೆಗೆ ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸ್ಥಾಪಿಸುವ ಉದ್ಯಮಗಳಿಗೆ ಬ್ಯಾಂಕುಗಳಿಂದ ಯಾವದೇ ರೀತಿಯ ಸ್ಥಿರ ದಾಖಲಾತಿಗಳ ಅಗತ್ಯವಿಲ್ಲದೆ ಸಾಲ ಒದಗಿಸುವ ಯೋಜನೆ ಇದಾಗಿದ್ದು, ಕೊಡಗು ಜಿಲ್ಲೆಯಲ್ಲಿರುವ 175 ಬ್ಯಾಂಕುಗಳ ಶಾಖೆಗಳಲ್ಲಿ ಕನಿಷ್ಟ ಒಬ್ಬರಿಗೆ ಸಾಲ ನೀಡುವ ಗುರಿಯನ್ನು ನೀಡಲಾಗಿದೆ.

ಇದುವರೆಗೆ 28 ಮಂದಿಗೆ ಆರ್ಥಿಕ ಸಾಲದ ಮಂಜೂರಾತಿ ದೊರೆತಿದ್ದು, ಈಗಾಗಲೇ 23 ಫಲಾನುಭವಿಗಳಿಗೆ ರೂ. 3.75 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಈ ಸಾಲ ಯೋಜನೆಯಡಿ ಕೇಂದ್ರ ಸರ್ಕಾರದ ಭದ್ರತೆಯ ಲಭ್ಯತೆ ಇದ್ದು, ಪ್ರತಿಯೊಬ್ಬ ಫಲಾನುಭವಿಯು ಈ ಯೋಜನೆ ಪಡೆದುಕೊಳ್ಳಲು ಮುಂದಾಗಬೇಕಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗುಪ್ತಾ ಹಾಗೂ ನಬಾರ್ಡ್‍ನ ನಾಣಯ್ಯ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಜೀವನ್ ಸುರಕ್ಷಾ ಯೋಜನೆ: ಈ ಯೋಜನೆಯಡಿ ವಾರ್ಷಿಕವಾಗಿ ಪ್ರತಿಯೊಬ್ಬರೂ ಸಹ ಕೇವಲ ರೂ. 12 ವಿಮಾ ಪಾವತಿ ಮಾಡಿದ್ದಲಿ,್ಲ ಅಪಘಾತಗಳಿಂದ ಮರಣ ಹೊಂದಿದ್ದಲ್ಲಿ ಅವರ ಕುಟುಂಬದವರಿಗೆ ವಿಮಾ ಪರಿಹಾರ ನೀಡುವ ಯೋಜನೆಯಾಗಿದೆ.

ಈ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 70,843 ಮಂದಿ ಹೆಸರು ನೋಂದಾಯಿಸಿದ್ದಾರೆ. 9 ಕುಟುಂಬದವರು ವಿಮಾ ಪರಿಹಾರ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಜೀವನ್ ಜ್ಯೋತಿ ಭೀಮಾ ಯೋಜನೆ: ಈ ಯೋಜನೆಯಡಿ ವಾರ್ಷಿಕವಾಗಿ 330 ರೂ. ಹಣ ಪಾವತಿ ಮಾಡಬೇಕಿದ್ದು, ಅಂತಹ ನೋಂದಾಯಿತ ವ್ಯಕ್ತಿಗಳು ಸ್ವಾಭಾವಿಕವಾಗಿ ಮರಣ ಹೊಂದಿದ್ದಲ್ಲಿ ಅವರ ಕುಟುಂಬದವರಿಗೆ ರೂ. 2 ಲಕ್ಷ ವಿಮಾ ಪರಿಹಾರ ದೊರೆಯಲಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೇ 34,353 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. 14 ಮಂದಿ ಕುಟುಂಬಕ್ಕೆ ವಿಮಾ ಪರಿಹಾರ ದೊರೆತಿದೆ.

ಅಟಲ್ ಪಿಂಚಣಿ ಯೋಜನೆ: ಈ ಯೋಜನೆಯಡಿ ವಯೋಮಿತಿಗೆ ಅನುಗುಣವಾಗಿ ಕನಿಷ್ಟ ಒಂದು ಸಾವಿರ ಪಿಂಚಣಿ ಮಾಸಾಶನ ಪಡೆಯಬಹುದಾಗಿದ್ದು, ವಾರ್ಷಿಕವಾಗಿ ರೂ. 42 ಪಾವತಿಸಬೇಕಿದೆ. ರೂ. 5 ಸಾವಿರ ಮಾಸಾಶನ ಪಡೆಯಬೇಕಿದ್ದಲ್ಲಿ ಮಾಸಿಕವಾಗಿ 40 ವರ್ಷದವರೆಗೆ ರೂ. 210 ಪಾವತಿಸಬೇಕಿದೆ.

ಈ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 6,054 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ನಾಣಯ್ಯ ಮಾಹಿತಿ ನೀಡಿದ್ದಾರೆ.

ಈ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆಯಲು ಬ್ಯಾಂಕ್‍ಗಳಲ್ಲಿ ಉಳಿತಾಯ ಖಾತೆ ಹೊಂದಿರಬೇಕು. ಈ ಯೋಜನೆಯಡಿ ಮಾಸಿಕ ಹಾಗೂ ವಾರ್ಷಿಕ ವಂತಿಗೆ ನೇರವಾಗಿ ಬ್ಯಾಂಕ್ ಖಾತೆಯಿಂದ ಪಾವತಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.