ಮಡಿಕೇರಿ, ಜು. 12: ‘ಕಿಡಿ’ ಕಿರುಚಿತ್ರ ಖ್ಯಾತಿಯ ಫೀ.ಮಾ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳ ತಂಡ ಸಾಮಾಜಿಕ ಕಳಕಳಿಯನ್ನು ಬಿಂಬಿಸುವ “ಜಟಾಯು” ಎನ್ನುವ ಮತ್ತೊಂದು ಕಿರುಚಿತ್ರವನ್ನು ನಿರ್ಮಿಸಿದ್ದು, ತಾ. 15 ರಂದು ನಗರದಲ್ಲಿ ಬಿಡುಗಡೆಯಾಗಲಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಿರುಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ನಿರ್ದೇಶಕ ಎಂ.ಎಸ್. ವಿನಯ್ ಕುಮಾರ್, ಜಟಾಯು ಲವ್ ಪೊಲಿಟಿಕ್ಸ್ ಕಿರು ಚಿತ್ರವನ್ನು ಕನ್ನಡ ಮತ್ತು ತುಳು ಭಾಷೆಗಳಲ್ಲಿ ನಿರ್ಮಿಸಲಾಗಿದೆ. ಕಿರುಚಿತ್ರ ಒಂದು ಗಂಟೆ ಅವಧಿಯದ್ದಾಗಿದೆ ಎಂದು ತಿಳಿಸಿದರು.

ಕಿರುಚಿತ್ರವನ್ನು ನಗರದ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ತಾ. 15 ರಂದು ಬೆಳಿಗ್ಗೆ 10 ಗಂಟೆಗೆ ಕನ್ನಡದ ನಟ, ನಿರ್ಮಾಪಕ ಮಿತ್ರ ಅವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಉದ್ಯಮಿ ಐತಪ್ಪ ರೈ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಚಿತ್ತಾರ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕಿ ಸವಿತಾ ರೈ, ನಗರದ ಕಿಂಗ್ಸ್ ಆಫ್ ಕೂರ್ಗ್ ಡ್ಯಾನ್ಸ್ ಇನ್‍ಸ್ಟಿಟ್ಯೂಷನ್‍ನ ಮಹೇಶ್, ಆಕಾಶÀವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ, ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ, ಕಿರುಚಿತ್ರ ನಿರ್ದೇಶಕ ಮಧು ಶಿವಮೊಗ್ಗ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.

ಗುಬ್ಬಿ ಕ್ರಿಯೇಷನ್ಸ್ ವತಿಯಿಂದ ಅರ್ಪಿಸಲ್ಪಡುತ್ತಿರುವ ಜಟಾಯು ಲವ್ ಪೊಲಿಟಿಕ್ಸ್ ಕಿರುಚಿತ್ರದಲ್ಲಿ ನಾಯಕನಾಗಿ ಸಚಿನ್, ನಾಯಕಿಯರಾಗಿ ರಕ್ಷಿತಾ, ಸನ್ನಿಧಿ ಸೇರಿದಂತೆ 20 ರಿಂದ 25 ಮಂದಿ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ನಮಿತಾ ನಾಯ್ಕ್ ಛಾಯಾಗ್ರಾಹಕರಾಗಿದ್ದು, ಸಹಾಯಕ ನಿರ್ದೇಶಕರಾಗಿ ಕೌಶಿಕ್ ಎಸ್.ಎಸ್. ಕಾರ್ಯನಿರ್ವಹಿಸಿದ್ದಾರೆ. ಉದ್ಘಾಟನೆಯಂದು ಕಿರುಚಿತ್ರ ಗುಬ್ಬಿ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್‍ನಲ್ಲಿ ಮತ್ತು ಚಿತ್ತಾರ ಚಾನೆಲ್‍ನಲ್ಲಿ ಪ್ರಸಾರಗೊಳ್ಳಲಿದೆ ಎಂದು ಮಾಹಿತಿಯನ್ನಿತ್ತರು.

ಜಿಲ್ಲಾ ಕೇಂದ್ರ ಮಡಿಕೇರಿ, ಶನಿವಾರಸಂತೆ ವಿಭಾಗಗಳಲ್ಲಿ ಕಿರುಚಿತ್ರವನ್ನು ಚಿತ್ರೀಕರಿಸಲಾಗಿದ್ದು, ಇದರ ನಿರ್ಮಾಣಕ್ಕೆ ಅಂದಾಜು ರೂ. 10 ರಿಂದ 15 ಸಾವಿರ ವೆಚ್ಚವಾಗಿರುವದಾಗಿ ವಿನಯ್ ಕುಮಾರ್ ತಿಳಿಸಿದರು.

ಗೋಷ್ಠಿಯಲ್ಲಿ ಕಿರುಚಿತ್ರದ ಸಹಾಯಕ ನಿರ್ದೇಶಕ ಕೌಶಿಕ್ ಎಸ್.ಎಸ್., ನಾಯಕ ಕೆ.ಆರ್. ಸಚಿನ್ ಹಾಗೂ ಸಂಯೋಜಕ ಎಂ.ಎಸ್. ರಂಜಿತ್ ಉಪಸ್ಥಿತರಿದ್ದರು.